ಸರ್ಕಾರಿ ಜಾಗದಲ್ಲಿ ಮೇಕೆ ಶೆಡ್‌: ನೋಟಿಸ್ ನೀಡಿದ್ರೂ ತೆರವಿಲ್ಲ

| Published : Jun 12 2025, 03:59 AM IST

ಸರ್ಕಾರಿ ಜಾಗದಲ್ಲಿ ಮೇಕೆ ಶೆಡ್‌: ನೋಟಿಸ್ ನೀಡಿದ್ರೂ ತೆರವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ಉಲ್ಲೇಪುರ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮೇಕೆ ಶೆಡ್ ನಿರ್ಮಿಸಿರುವುದು.

ಕನ್ನಡಪ್ರಭ ವಾರ್ತೆ ಹನೂರು

ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಜಾಗದಲ್ಲಿ ಮೇಕೆ ಶೆಡ್‌ ನಿರ್ಮಿಸಿಕೊಂಡಿರುವ ಬಗ್ಗೆ ಜಿಲ್ಲಾಡಳಿತ ನೋಟಿಸ್ ನೀಡಿ ಎರಡು ತಿಂಗಳು ಕಳೆದಿದ್ದು, ಜಿಲ್ಲಾಧಿಕಾರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದರೂ ಇದುವರಗೆ ತೆರವಾಗಿಲ್ಲ.

ಹನೂರು ತಾಲೂಕಿನ ಕೊಳ್ಳೇಗಾಲ ಹಾಗೂ ಹನೂರು ಮುಖ್ಯರಸ್ತೆ ಹೊಂದಿಕೊಂಡಿರುವ ಪ್ರಜಾಸೌಧ ನಿರ್ಮಾಣ ಮಾಡಲು ನಿವೇಶನ ಗುರುತು ಮಾಡಿರುವ ಪಕ್ಕದಲ್ಲಿಯೇ ಇರುವ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಕಬಳಿಸಲು ಖಾಸಗಿ ವ್ಯಕ್ತಿ ಓರ್ವ ಮೇಕೆ ಶೆಡ್ ನಿರ್ಮಾಣ ಮಾಡಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಸಹ ಪಡೆದುಕೊಂಡಿದ್ದು, ಜಮೀನನ್ನು ಅಧಿಕಾರಿಗಳು ಸ್ವಾಧೀನ ಪಡಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಜಮೀನನ್ನು ತೆರವುಗೊಳಿಸದೆ ವಿಳಂಬಧೋರಣೆ ಅನುಸರಿಸುತ್ತಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಸರ್ಕಾರಿ ಭೂಕಬಳಿಕೆ:

ಕಂದಾಯ ಇಲಾಖೆಗೆ ಬರುವ ಸರ್ಕಾರಿ ಜಮೀನನ್ನು ಮಂಗಳ ಗ್ರಾಮದ ವಿಶ್ವೇಶ್ವರ ಪ್ರಸಾದ್ ಪ್ರಜಾಸೌಧ ನಿರ್ಮಾಣ ಮಾಡುವ ಸ್ಥಳದ ಸಮೀಪದಲ್ಲಿಯೇ ಬರುವ ಕೋಟ್ಯಂತರ ಬೆಲೆಬಾಳುವ ಸರ್ಕಾರಿ ಜಮೀನು, ಉಲ್ಲೇಪುರ ಸರ್ವೆ ನಂಬರ್ 355 /1 ರಲ್ಲಿ 5.50 ಎಕರೆ 356/, ನಲ್ಲಿ 5,94 ಎಕರೆ 356, ಸಿ 2,58 ಎಕರೆ ಜಮೀನಿನಲ್ಲಿ ಅಕ್ರಮ ಶೆಡ್ ನಿರ್ಮಿಸಿರುವುದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶವಿದ್ದರೂ ಕ್ರಮ ಕೈಗೊಳ್ಳದಕ್ಕೆ ತಾಲೂಕು ಘಟಕದ ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ:

ಉಲ್ಲೇಪುರ ಸರ್ವೆ ನಂಬರ್‌ಗಳಲ್ಲಿ ಸರ್ಕಾರಿ ಜಮೀನಲ್ಲಿ ಅಕ್ರಮ ಶೆಡ್ ನಿರ್ಮಿಸಿರುವುದನ್ನು ಸಾರ್ವಜನಿಕರು ಇಂದಿನ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕೂಡಲೇ ಸರ್ಕಾರಿ ಜಮೀನನ್ನು ತೆರವುಗೊಳಿಸುವಂತೆ 24-5-2023 ರಂದು ಹಾಗೂ 4-4-2025, ರಂದು ಎರಡು ಬಾರಿ ನೋಟಿಸ್ ಜಾರಿಗೊಳಿಸಿ, ಜಮೀನನ್ನು ಕಂದಾಯ ಅಧಿಕಾರಿಗಳು ಸಹ ಅಳತೆ ಮಾಡಿ ಗುರುತು ಮಾಡಿದ್ದರು. ಎರಡು ಬಾರಿ ನೋಟಿಸ್ ಜಾರಿಗೊಳಿಸಿದ್ದರೂ ತರವಿಗೆ ಮುಂದಾಗದೆ ಇರುವುದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಕಂದಾಯ ಅಧಿಕಾರಿಗಳು ಗುರಿಯಾಗಿದ್ದಾರೆ.

ಪ್ರಜಾಸೌಧ ನಿರ್ಮಾಣ ಮಾಡುವ ಸ್ಥಳದ ಸಮೀಪದಲ್ಲಿಯೇ ಇರುವ ಕೋಟ್ಯಂತರ ರು. ಬೆಲೆಬಾಳುವ ಸರ್ಕಾರಿ ಜಮೀನನ್ನು ತೆರವುಗೊಳಿಸುವಂತೆ ಈ ಹಿಂದೆ ಜಿಲ್ಲಾಧಿಕಾರಿಗೆ ನಾಗರಿಕರು ಮನವಿ ಸಲ್ಲಿಸಿದ್ದಾರೆ. ಜೊತೆಗೆ ಸಂಘಟನೆಯಿಂದಲೂ ಕ್ರಮ ಕೈಗೊಳ್ಳುವಂತೆ ಮಾ.12, 2025ರಂದು ಪಟ್ಟಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೂ ಅಕ್ರಮ ಶೆಡ್ ತೆರವುಗೊಳಿಸಲು ದೂರು ಸಲ್ಲಿಸಲಾಗಿದೆ. ಕೂಡಲೇ ಇತ್ತ ಗಮನ ಹರಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸಂಘಟನೆ ವತಿಯಿಂದ ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.

ಬಸವರಾಜ್, ಛಲವಾದಿ ಮಹಾಸಭಾ ಅಧ್ಯಕ್ಷ, ಹನೂರು ತಾಲೂಕು