ಸಾತ್ವಿಕ್‌ ಮುಜಗೊಂಡ ಮೇಲಿದೆ ದೇವರ ದಯೆ

| Published : Apr 11 2024, 12:47 AM IST

ಸಾರಾಂಶ

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಮಗು ಸಾತ್ವಿಕ ಆಟವಾಡುತ್ತ ಕೊಳವೆ ಬಾವಿಯಲ್ಲಿ ಬಿದ್ದು ಪವಾಡಸದೃಶವಾಗಿ ಬದುಕಿ ಬಂದ ಹಿನ್ನೆಲೆಯಲ್ಲಿ ಎಸಿ ಅಬೀದ್‌ ಗದ್ಯಾಳ ಅವರು ಸಾತ್ವಿಕ್‌ ಮನೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ಕ್ಷೇಮ ವಿಚಾರಿಸಿ, ಬಟ್ಟೆ, ಸಿಹಿ ನೀಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಲಚ್ಯಾಣ ಗ್ರಾಮದ ಮಗು ಸಾತ್ವಿಕ ಆಟವಾಡುತ್ತ ಕೊಳವೆ ಬಾವಿಯಲ್ಲಿ ಬಿದ್ದು ಪವಾಡಸದೃಶವಾಗಿ ಬದುಕಿ ಬಂದ ಹಿನ್ನೆಲೆಯಲ್ಲಿ ಎಸಿ ಅಬೀದ್‌ ಗದ್ಯಾಳ ಅವರು ಸಾತ್ವಿಕ್‌ ಮನೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ಕ್ಷೇಮ ವಿಚಾರಿಸಿ, ಬಟ್ಟೆ, ಸಿಹಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ಮಗುವಿನ ಅದೃಷ್ಟ ಚೆನ್ನಾಗಿದೆ. ದೇವರ ದಯೆ ಆತನ ಮೇಲೆ ಇದೆ. ಹಿರಿಯ ಅಧಿಕಾರಿ ವರ್ಗ, ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಳಕಳಿ ವಹಿಸಿ ಮಗುವನ್ನು ರಕ್ಷಿಸಬೇಕು ಎಂದು ಸವಾಲನ್ನು ಸ್ವೀಕರಿಸಿ ಕಾರ್ಯಾಚರಣೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ. ನಿಮ್ಮ ಮಗುವಿನ ಅದೃಷ್ಟ ಚೆನ್ನಾಗಿದೆ. ದೇವರು ಆತನ ಮೇಲೆ ಕರುಣೆ ತೋರಿದ್ದಾನೆ ಎಂದು ಮಗುವಿನ ತಂದೆ ತಾಯಿಗಳಿಗೆ ಧೈರ್ಯ ತುಂಬಿದರು.

ನಂತರ ಮಗುವಿನ ಕುಟುಂಬ ವರ್ಗದವರು, ಮಗುವನ್ನು ರಕ್ಷಿಸಲು ಕಾರಣಿಕರ್ತರಾದ ತಾಲೂಕು ಆಡಳಿತಕ್ಕೆ ಅಭಿನಂದನೆ ಸಲ್ಲಿಸಿ, ತಾಲೂಕಿನ ಹಿರಿಯ ಅಧಿಕಾರಿ ಎಸಿ ಅಬೀದ್‌ ಗದ್ಯಾಳ ಅವರಿಗೆ ತಾಲೂಕಿನ ಎಲ್ಲ ಅಧಿಕಾರಿಗಳ ಪರವಾಗಿ ಸನ್ಮಾನಿಸಿದರು. ಡಾ.ಎ.ಪಿ.ಜೆ ಅಬ್ದುಲ್‌ಕಲಾಂ ಫೌಂಡೇಶನ್‌ ವತಿಯಿಂದ ಸನ್ಮಾನ:

ಪಟ್ಟಣದ ಡಾ/ಎಪಿಜೆ ಅಬ್ದುಲ್‌ಕಲಾಂ ಫೌಂಡೇಷನ್‌ ಹಾಗೂ ಮುಸ್ಲಿಂ ಸಮಾಜದ ವತಿಯಿಂದ ಸಾವು ಗೆದ್ದು ಬಂದ ಸ್ವಾತಿಕ್ ನ ಯಶಸ್ವಿ ಕಾರ್ಯಾಚರಣೆ ನಡೆಸಿದ ತಾಲೂಕು ಆಡಳಿತದ ಪರವಾಗಿ ಹಿರಿಯ ಅಧಿಕಾರಿ ಎಸಿ ಅಬೀದ ಗದ್ಯಾಳ ಅವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸಿ ಅಬೀದ್‌ ಗದ್ಯಾಳ ಅವರು, ಸಾತ್ವಿಕ್‌ ಯಶಸ್ವಿ ಕಾರ್ಯಾಚರಣೆಯಲ್ಲಿ ನನ್ನದೇನು ಪಾತ್ರವಿಲ್ಲ. ಜಿಲ್ಲೆ, ತಾಲೂಕು ಆಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ವಿಶೇಷ ಪರಿಣಿತ ತಂಡದಶ್ರಮ, ಶಾಸಕ ಯಶವಂತರಾಯಗೌಡ ಪಾಟೀಲ ಅವರ ಮಾರ್ಗದರ್ಶನ ಸೇರಿದಂತೆ ಅನೇಕರು ನಾಡಿನ ಇಡೀ ಮಾನವ ಕುಲಕೋಟಿ ಮಗು ಜೀವಂತವಾಗಿ ಹೊರಗೆ ಬರಲಿ ಎಂದು ದೇವರ ನಾಮಸ್ಮರಣೆ ಮಾಡಿದ್ದಾರೆ. ಹೀಗಾಗಿ ಸ್ವಾತಿಕ್‌ ಮುಜಗೊಂಡ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾನೆ. ಇಂತಹ ಘಟನೆ ವೈದ್ಯಕೀಯ ಲೋಕಕ್ಕೂ ನಿಲುಕದ ಪ್ರಶ್ನೆಯಾಗಿದೆ. ನಾನು ವಿದ್ಯಾರ್ಥಿ ದಶೆಯಿಂದ ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಸನ್ನಿಧಿಯಲ್ಲಿ ಶಿಕ್ಷಣ ಪಡೆದಿರುವೆ. ಹಿಂದಿನ ಪವಾಡಗಳು ಸ್ಮರಿಸಿದರೆ ಶ್ರೀ ಸಿದ್ದಲಿಂಗ ಮಹಾರಾಜರ ಆಶೀರ್ವಾದ ಕೂಡಾ ಆ ಮಗುವಿನ ಮೇಲೆ ಇದೆ. ಸಾತ್ವಿಕ್‌ನ ಜೀವನ ಒಂದು ಯಶೋಗಾಥೆಯಂತಾಗಿದೆ. ಭಗವಂತ ಮಗುವಿಗೆ ದೀರ್ಘಾಯುಷ್ಯ , ಆರೋಗ್ಯ ನೀಡಲಿ. ಕಾರ್ಯಾಚರಣೆ ಸಮಯದಲ್ಲಿ ಸಾಕಷ್ಟು ಜನರು ಹಾಗೂ ಮುಖಂಡರು ದೃಶ್ಯ, ಪ್ರಿಂಟ್ ಮಿಡಿಯಾ, ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕರು ಸಹರಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಶಾಕೀರ ಮೌಲಾನಾ ಮಾತನಾಡಿದರು. ಅಂಜುಮನ್ ಮಸಜೀದ ಅಧ್ಯಕ್ಷ ಅಬ್ದುಲ್‌ ರಷೀದ ಅರಬ, ಉಪಾಧ್ಯಕ್ಷ ಫಾರೂಕ ತುರ್ಕಿ, ಕಾರ್ಯದರ್ಶಿ ರಫೀಕ ಇಂಡಿಕರ, ಶರೀಫ ಪಟೇಲ, ಇಲಿಯಾಸ ಬೋರಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ ಮೋಮಿನ, ಅಬ್ದುಲ್‌ರಶೀದ ಮುಗಾಳಿ, ಅಬ್ದುಲ್‌ ರಹೀಮಾನ ಬಾಗವಾನ, ನೂರಅಹ್ಮದ, ಅಸ್ಲಂ ಪಟೇಲ, ಜೈನುದ್ದಿನ ಬಾಗವಾನ, ಎ.ಪಿ.ಜೆ.ಅಬ್ದುಲ್‌ ಕಲಾಂ ಫೌಂಡೇಷನ್‌ ಅಧ್ಯಕ್ಷ ಅಸ್ಫಾಕ ಕೋಕಣಿ, ಕಾರ್ಯದರ್ಶಿ ಬಾದಶಾ ಬೋರಾಮಣಿ, ಹಸನ ಮುಜಾವರ, ಮುಸ್ತಾಕ ನಾಯಿಕೋಡಿ, ನಾಸೀರ ಇನಾಂದಾರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.