ಸಾರಾಂಶ
ಕನ್ನಡಪ್ರಭ ವಾರ್ತೆ ಹಳೆಬೀಡು
ಧಾರ್ಮಿಕ ಕಾರ್ಯಕ್ರಮಗಳು ಶಾಂತಿ ನೀಡುವ ಕೇಂದ್ರಗಳಾಗಬೇಕು. ಭಕ್ತರು ಹಾಗೂ ಜನಸಾಮಾನ್ಯರಿಗೆ ದೊರೆಯುವ ಮನೋಲ್ಲಾಸದ ಜೊತೆ ಜೊತೆಗೆ ಶಾಂತಿ ಸಮೃದ್ದಿ ನೆಮ್ಮದಿ ದೊರೆಯುವಂತಾಗಬೇಕು ಎಂದು ಸೋಮಶೇಖರ ಸ್ವಾಮೀಜಿ ತಿಳಿಸಿದರು.ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಮ್ಮನವರ ಜಾತ್ರಾ ಮಹೋತ್ಸವ, ಕರಿಬಸವ ಅಜ್ಜಯ್ಯನವರ ಪೂಜೆ ಕಾರ್ಯಕ್ರಮ, ಲಕ್ಷ ದೀಪೋತ್ಸವದ ಸಾನಿಧ್ಯವಹಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ಪುಷ್ಪಗಿರಿ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಲಕ್ಷ ದೀಪೋತ್ಸವ ಆಚರಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಿಂದ ದಣಿದ ಮನಸ್ಸುಗಳಿಗೆ ಉಲ್ಲಾಸ ದೊರೆತರೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಾಂಧವ್ಯ, ಮನಸ್ಸಿಗೆ ಸಂತೃಪ್ತಿ ತಂದಿದೆ. ಈ ಬಾರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮ ಮತ್ತು ಕರಿಬಸವ ಅಜ್ಜಯ್ಯನವರ ಜಾತ್ರಾ ಮಹೋತ್ಸವವು ಅರ್ಥಪೂರ್ಣವಾಗಿ ಜರುಗಿದೆ. ಜತೆಗೆ ನಮ್ಮ ಮನಸ್ಸಿಗೂ ತೃಪ್ತಿ ತಂದಿದೆ. ಎಲ್ಲರೂ ಕೂಡಿ ಬಾಳಿದರೆ ಅದೇ ನಿಜವಾದ ಸ್ವರ್ಗ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಎಚ್.ಬಿ.ಅಪ್ಪಣ್ಣಯ್ಯ, ಬಿ.ಶಿವರುದ್ರಪ್ಪ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಅವರ ಕುಟುಂಬಕ್ಕೆ ನೀಡಿದರು. ಶ್ರೀ ಪುಷ್ಪಗಿರಿ ಸೇವಾರತ್ನ ಪ್ರಶಸ್ತಿಯನ್ನು ಕಾಂತರಾಜು.ಎಚ್.ಆರ್. ರಾಜಶೇಖರ್, ಚನ್ನಬಸವಯ್ಯ, ಎಂ,ರೇವಣ್ಣಯ್ಯ ಸಮಾಜಮುಖಿಯಾಗಿ ದುಡಿದ ಗಣ್ಯರಿಗೆ ನೀಡಿ ಸನ್ಮಾನಿಸಿದರು.ಬೇಲೂರು ವಿಧಾನಸಭಾನ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್, ತಹಸೀಲ್ದಾರ್ ಮಮತಾ, ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಆಡಳಿತಾಧಿಕಾರಿ ಕಿಟ್ಟಪ್ಪ, ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷ ವೇಣುಕುಮಾರ್ ತಾಲೂಕು ಪ್ರತ್ರಕರ್ತರ ಸಂಘದ ಅಧ್ಯಕ್ಷೆ ಭಾರತಿಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಾಲಾಕ್ಷ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಅಡಗೂರು ಬಸವರಾಜು, ಹಳೆಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಗೋ.ಸೋ.ಹಳ್ಳಿ ಗ್ರಾಪಂ ಅಧ್ಯಕ್ಷ ಧರ್ಮಣ್ಣ, ಸಮಾಜದ ಮುಖಂಡರಾದ ಸಿದ್ದರಾಜು, ಗಂಗೂರು ಶಿವಕುಮಾರ್ ,ಸೋಮಶೇಖರ್, ತುಕರಾಮ್, ಶರಣ, ಸಾಹಿತ್ಯ ಪರಿಷತ್ ಅಧ್ಯಕ್ಷ .ಹೆಬ್ಬಾಳು ಹಾಲಪ್ಪ ಹಾಜರಿದ್ದರು.