ಸಾರಾಂಶ
ಬೆಳಗಾವಿ: ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಹಾಗೂ ಸರಕಳ್ಳತನ ಪ್ರಕರಣಗಳಿಗೆ ಸಂಬಂಧೀಸಿದಂತೆ ಇಬ್ಬರನ್ನು ಬಂಧಿಸಿ ಆತನಿಂದ ₹10,76,900 ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮನೆಕಳ್ಳತನ ಪ್ರಕರಣದಲ್ಲಿ ಮಾಹಾರಷ್ಟ್ರದ ರಫೀಕ್ ಮಹಮ್ಮದ್ ಶೇಖ ಹಾಗೂ ಸರಗಳ್ಳತನ ಪ್ರಕರಣದಲ್ಲಿ ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದ ಪ್ರಜ್ವಲ್ ಖಾನಜೆ ಬಂಧಿತ ಆರೋಪಿಗಳು. ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 5 ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಪ್ಪೊಪ್ಪಿಕೊಂಡಿದ್ದು, ಬಂಧಿತರಿಂದ ಒಟ್ಟು ₹ 1076900 ಮೌಲ್ಯದ 48 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಹಾಗೂ ₹ 3800ಮೌಲ್ಯದ 40 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾದ ಡಿಸಿಪಿ ಸ್ನೇಹ ಪಿ ವಿ ಮಾರ್ಗದರ್ಶನದಲ್ಲಿ ಉದ್ಯಮಬಾಗ ಪೊಲೀಸ್ ಠಾಣೆಯ ಇನ್ಸಪೆಕ್ಟರ ಡಿ. ಕೆ ಪಾಟೀಲ ಮತ್ತು ಪಿಎಸ್ಐಗಳಾದ ಕಿರಣ ಹೊನಕಟ್ಟಿ , ಆರ್.ಪಿ.ಕದಮ ನೇತೃತ್ವದಲ್ಲಿ ಸಿಬ್ಬಂದಿ ಭರಮಣ್ಣ ಕರೆಗಾರ್, ಜಗದೀಶ್ ಹಾದಿಮನಿ, ಈರಣ್ಣ ಚವಲಗಿ, ಶಿವಕುಮಾರ್ ಕರ್ಕಿ, ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ಕಾರ್ಯದಲ್ಲಿ ತೋಡಗಿದ್ದರು. ಈ ಕುರಿತು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದ್ವಿಚಕ್ರ ವಾಹನ ಕಳ್ಳನ ಬಂಧನ:
ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಧ್ವಿಚಕ್ರ ವಾಹನ ಕಳ್ಳನನ್ನು ಪೊಲೀಸರು ಬಂಧಿಸಿ ₹ 1.5 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಆಜಾದ್ ಮೆಹಬೂಬಸುಭಾನಿ ಕೀಲ್ಲೆದಾರ ಬಂಧಿತ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಆಜಾದನನ್ನು ಬಂಧಿಸಿ ವಿಚಾರಣೆ ನಡೆಸಿದ ಸಮಯದಲ್ಲಿ ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಕುರಿತು ಮಾಹಿತಿ ನೀಡಿದ್ದಾನೆ. ನಂತರ ಕಳ್ಳತನ ಮಾಡಲಾಗಿರುವ ವಾಹನಗಳ ಪತ್ತೆ ಕಾರ್ಯ ನಡೆಸಿ ₹ 1.5 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಎಸ್. ಆರ್. ಮುತ್ತತ್ತಿ ಮತ್ತು ಅವಿನಾಶ ಯರಗೊಪ್ಪ, ಸಿಬ್ಬಂದಿ ಅರುಣ ಕಾಂಬಳೆ , ಎಸ್.ಬಿ ಬಾಬಣ್ಣವರ, ಪ್ರಭಾಕರ ಭೂಸಿ, ರಾಜು ಕೆಳಗಿನಮನಿ ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ, ಮಹದೇವ್ ಕಾಶಿದ ಪಾಲ್ಗೊಂಡಿದ್ದರು.