ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಹೆಬಳೆಯ ಕುಕ್ಕನೀರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು 50 ವರ್ಷ ಪೂರೈಸಿದ್ದು, ಈ ಪ್ರಯುಕ್ತ ಎ. 11 ಮತ್ತು 12 ರಂದು ಅದ್ಧೂರಿಯಾಗಿ ಸುವರ್ಣ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದರು.

ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1975ರಲ್ಲಿ ಅಂದಿನ ಸಣ್ಣ ಗ್ರಾಮದಲ್ಲಿ ಶಾಲೆ ಆರಂಭಗೊಂಡಿದ್ದು, ಸ್ಥಳೀಯರ ಸಹಕಾರದಿಂದ 50ನೇ ವರ್ಷ ಸಂಭ್ರಮ ಆಚರಿಸುತ್ತಿದ್ದೇವೆ. ನಾರಾಯಣ ನಾಯ್ಕ ಅವರ ಜಾಗದಲ್ಲಿ ಶಾಲೆ ಆರಂಭವಾಗಿ, ನಂತರ ಗಣಪತಿ ಕಾಮತ್ 8 ಗುಂಟೆ ಜಾಗವನ್ನು ದಾನವಾಗಿ ನೀಡಿದ ವಿಚಾರವನ್ನು ಅವರು ಸ್ಮರಿಸಿದರು.

ಶಾಲಾ ಮುಖ್ಯ ಶಿಕ್ಷಕಿ ರೇಖಾ ಪಟಗಾರ ಮಾಹಿತಿ ನೀಡಿ, 11ರಂದು ವೆಂಕಟಾಪುರದಿಂದ ಕುಕನೀರ್ ಶಾಲೆಯವರೆಗೆ ಚಂಡೆ ವಾದನದೊಂದಿಗೆ ಮೆರವಣಿಗೆ ನಡೆಯಲಿದ್ದು, ನಿವೃತ್ತ ಶಿಕ್ಷಕರು ಹಾಗೂ ದಾನಿಗಳನ್ನು ಸನ್ಮಾನಿಸಲಾಗುವುದು. ಅದೇ ದಿನ ಬೆಳಗ್ಗೆ 10 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ, ಸಂಜೆ 6 ಗಂಟೆಗೆ ಸುವರ್ಣ ಮಹೋತ್ಸವ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಯನ್ನು ಸಚಿವ ಮಂಕಾಳ ವೈದ್ಯ ನೆರವೇರಿಸಲಿದ್ದಾರೆ. ರಾತ್ರಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 12ರಂದು ಮಧ್ಯಾಹ್ನ ಭೋಜನ ವ್ಯವಸ್ಥೆ ಬಳಿಕ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕ ಸುನೀಲ್ ನಾಯ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಶಿಕ್ಷಕ ನಾರಾಯಣ ನಾಯ್ಕ ಮಾತನಾಡಿ, ಎ.12ರಂದು ರಾತ್ರಿ ಚಿಟ್ಟೆ ಎಂಬ ಎಐ ತಂತ್ರಜ್ಞಾನ ಆಧಾರಿತ ಭಾವನಾತ್ಮಕ ಮತ್ತು ಹಾಸ್ಯಮಯ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಈ ಸಂದರ್ಭ ಶಿಕ್ಷಣ ಇಲಾಖೆ ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.