ಗಾಲ್ಫ್‌ ಕ್ರೀಡೆ ಶ್ರೀಮಂತರ ಆಟವೆಂಬುದು ತಪ್ಪು ಕಲ್ಪನೆ : ನಾಡಗೌಡ

| Published : Oct 13 2025, 02:00 AM IST

ಸಾರಾಂಶ

ಚಿಕ್ಕಮಗಳೂರು, ಗಾಲ್ಫ್‌ ಕ್ರೀಡೆ ಶ್ರೀಮಂತರ ಆಟವೆಂಬುದು ತಪ್ಪು ಕಲ್ಪನೆ. ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸುವ ಜೊತೆಗೆ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಲು ಸದಾ ಬದ್ಧವಾಗಿದ್ದೇವೆ ಎಂದು ಗಾಲ್ಫ್‌ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸಂಜಯ್ ನಾಡಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗಾಲ್ಫ್‌ ಕ್ರೀಡೆ ಶ್ರೀಮಂತರ ಆಟವೆಂಬುದು ತಪ್ಪು ಕಲ್ಪನೆ. ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸುವ ಜೊತೆಗೆ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಲು ಸದಾ ಬದ್ಧವಾಗಿದ್ದೇವೆ ಎಂದು ಗಾಲ್ಫ್‌ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸಂಜಯ್ ನಾಡಗೌಡ ಹೇಳಿದರು.

ತಾಲೂಕಿನ ಅಲ್ಲಂಪುರ ಸಮೀಪದ ಗಾಲ್ಪ್ ಕ್ಲಬ್‌ನಲ್ಲಿ ರಾಜ್ಯ ಗಾಲ್ಫ್‌ ಅಸೋಸಿಯೇಷನ್ ಹಾಗೂ ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ಧ ರಾಜ್ಯಮಟ್ಟದ ಗಾಲ್ಫ್‌ ಕ್ರೀಡಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಗಾಲ್ಫ್‌ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಹೀಗಾಗಿ ಸ್ಥಳೀಯವಾಗಿ ಯುವ ಜನತೆಗೆ ಕ್ರೀಡೆಯನ್ನು ಪರಿಚಯಿಸುವ ಸಲುವಾಗಿ ವರ್ಷಕ್ಕೊಮ್ಮೆ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಿ ಕ್ರೀಡೆಗೆ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೇ ಬಡವರ್ಗದ ಕ್ರೀಡಾಸಕ್ತ ಯುವಕರಿಗೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಹಕರಿಸಲಾಗುತ್ತಿದೆ ಎಂದು ತಿಳಿಸಿದರು.ಪ್ರಸ್ತುತ ರಾಜ್ಯದಲ್ಲಿ ಸುಮಾರು 16 ಜಿಲ್ಲೆಗಳಲ್ಲಿ ಗಾಲ್ಫ್‌ ಸಂಸ್ಥೆ ಅಸ್ಥಿತ್ವದಲ್ಲಿದೆ. ಅನೇಕ ಯುವಕರು, ಶಾಲಾ ವಿದ್ಯಾರ್ಥಿಗಳಿಗೆ ಗಾಲ್ಫ್‌ ಕ್ರೀಡೆ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ಗಾಲ್ಫ್‌ ಆಟಗಾರರಿದ್ದು ಈ ಕ್ರೀಡಾಪಟುಗಳು ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯ ಸಾಧಿಸುವುದೇ ಅಸೋಸಿಯೇಷನ್ ಗುರಿಯಾಗಿದೆ ಎಂದರು.ಭಾರತದಲ್ಲಿ ಕರ್ನಾಟಕ ಗಾಲ್ಫ್‌ ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಗಾಲ್ಫ್‌ ಕ್ರೀಡೆಯಲ್ಲಿ ಕಠಿಣ ಪರಿಶ್ರಮದಿಂದ ತೊಡಗಿಸಿಕೊಳ್ಳುವ ಆಸಕ್ತಿ ಕ್ರೀಡಾಪಟುಗಳಿಗೆ ಸಮಗ್ರ ತರಬೇತಿಗಾಗಿ ಅಸೋಸಿಯೇಷನ್ ಕೋಟ್ಯಂತರ ಹಣ ಇರಿಸಿದ್ದು ಒಟ್ಟಾರೆ ಗಾಲ್ಫ್‌ ಕ್ರೀಡೆಯನ್ನು ದೇಶದಲ್ಲಿ ಮುಂಚೂಣಿಗೆ ತರುವುದೇ ಮೂಲ ಧ್ಯೇಯ ಎಂದು ತಿಳಿಸಿದರು.

ಗಾಲ್ಫ್‌ ಕ್ಲಬ್ ಸಂಸ್ಥಾಪಕ ಸುದರ್ಶನ್ ಮಾತನಾಡಿ, ಗಾಲ್ಫ್‌ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ವಿಶಾಲವಾದ ಆಟದ ಮೈದಾನ ನಿರ್ಮಿಸಿ, ಸ್ಪರ್ಧಾಳುಗಳಿಗೆ ಪ್ರೋತ್ಸಾಹಿಸುತ್ತಿದೆ. ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಕ್ರೀಡಾಸಕ್ತರು ಜಿಲ್ಲೆಗಾಗಮಿಸಿ ಸ್ಫರ್ಧೆಯಲ್ಲಿ ಭಾಗವಹಿಸಿರುವುದು ಅತ್ಯಂತ ಹೆಮ್ಮೆ ಯ ಸಂಗತಿ ಎಂದರು.

ಗಾಲ್ಫ್‌ ಕ್ರೀಡಾ ಸ್ಪರ್ಧೆಯಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿದ್ದು ಓಪನ್ ತಂಡದಲ್ಲಿ ಬೆಂಗಳೂರು ಗಾಲ್ಫ್‌ ಕ್ಲಬ್ ಎ ತಂಡ ಪ್ರಥಮ, ಬಿ ತಂಡ ದ್ವೀತಿಯ. ಗಾಲ್ಫ್‌ ಹ್ಯಾಂಡಿ ಕ್ರಾಫ್ಟ್ ತಂಡದಲ್ಲಿ ಎಂಇಜಿ ಆರ್ಮಿ ತಂಡ ಪ್ರಥಮ, ಕೆಜಿಎಫ್ ಜಿಮ್‌ಖಾನಾ ದ್ವೀತಿಯ ಹಾಗೂ ಸಿಂಗಲ್ ಸ್ಪರ್ಧೆಯಲ್ಲಿ ಮೈಸೂರು ಶ್ರೀಧರ್ ಸಿಂಗ್ ಪ್ರಥಮ. ಬೆಂಗಳೂರು ಆಯಾನ್‌ಜಂಗ್ ದ್ವೀತಿಯ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ರಾಜ್ಯ ಗಾಲ್ಪ್ ಅಸೋಸಿಯೇಷನ್ ಕಾರ್ಯದರ್ಶಿ ರಾಮ್‌ನಾಗಪ್ಪ, ಚಿಕ್ಕಮಗಳೂರು ಗಾಲ್ಫ್‌ ಕ್ಲಬ್ ನಾಯಕ ರವಿಶಂಕರ್, ಸ್ಪರ್ಧೆ ಆಯೋಜಕರಾದ ಎಚ್.ಡಿ.ವಿನಯ್‌ರಾಜ್, ರವಿ ಮುತ್ತಪ್ಪ, ಹೇಮಂತ್, ಶಿವಪ್ರಕಾಶ್, ಸಿ.ಜೆ.ಗೌತಮ್, ಎಚ್.ಕೆ.ಕೃತಿ ಉಪಸ್ಥಿತರಿದ್ದರು. 12 ಕೆಸಿಕೆಎಂ 3ಚಿಕ್ಕಮಗಳೂರಿನ ಹೊರ ವಲಯದಲ್ಲಿರುವ ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ರಾಜ್ಯ ಮಟ್ಟದ ಗಾಲ್ಪ್ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.