ಸಾರಾಂಶ
ಗದಗ: ಆ.12ರಿಂದ 19ರ ವರೆಗೆ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದ ಗೋಣಿಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಪ್ರವಚನ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಜರುಗುವವು ಎಂದು ಗೋಣಿಬಸವೇಶ್ವರ ಕಮಿಟಿಯ ಗೌರವಾಧ್ಯಕ್ಷ ಆನಂದಪ್ಪ ಪುರದ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆ. 12ರಂದು ಬೆಳಗ್ಗೆ 6 ಕ್ಕೆ ಬನ್ನಿಕಟ್ಟಿ ದೇವಸ್ಥಾನದಿಂದ ಕುಂಭಮೇಳದೊಂದಿಗೆ ಗೋಣಿಬಸವೇಶ್ವರ ಮೂರ್ತಿ ಹಾಗೂ ಕಳಸದ ಮೆರವಣಿಗೆವು ಗ್ರಾಮಕ್ಕೆ ಆಗಮಿಸುವುದು. ಸಂಜೆ 6ಕ್ಕೆ ಮಹಾತ್ಮ ಗೋಣಿಬಸವೇಶ್ವರ ಚರಿತ್ರೆಯ ಪ್ರವಚನ ಪ್ರಾರಂಭವಾಗುವುದು. ಕಾರ್ಯಕ್ರಮದಲ್ಲಿ ಕೊರ್ಲಹಳ್ಳಿ ಸಂಸ್ಥಾನಮಠದ ಪಟ್ಟದ ಚಿನ್ಮಯ ಸ್ವಾಮಿಗಳು ಸಾನಿಧ್ಯ ವಹಿಸುವರು. ಅಡವಿಸೋಮಾಪುರ ಗ್ರಾಪಂ ಅಧ್ಯಕ್ಷೆ ಪವಿತ್ರಾ ಹೊಸಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಗದಗ ಗ್ರಾಮೀಣ ಸಿಪಿಐ ಸಿದ್ದರಾಮೇಶ್ವರ ಗಡೇದ, ಗ್ರಾಪಂ ಉಪಾಧ್ಯಕ್ಷ ಶ್ಯಾಮಸುಂದರ ಡಂಬಳ, ಶ್ರೀಗೋಣಿ ಬಸವೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಲಂಕೆಪ್ಪ ಹೊಸಳ್ಳಿ, ಸದಸ್ಯ ವೀರನಗೌಡ ಹರ್ಲಾಪುರ ಉಪಸ್ಥಿತರಿರುವರು ಎಂದು ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಡಿ ಮಾತನಾಡಿ, ಆ. 12ರಿಂದ 19ರ ವರೆಗೆ ಪ್ರತಿದಿನ ಸಂಜೆ 6ಕ್ಕೆ ವೀರೇಶ್ವರ ಪುಣ್ಯಾಶ್ರಮದ ಶಂಭುಲಿಂಗ ಶಾಸ್ತ್ರಿಗಳಿಂದ ಗೋಣಿಬಸವೇಶ್ವರ ಚರಿತ್ರೆಯ ಪ್ರವಚನ ಕಾರ್ಯಕ್ರಮ ಜರುಗುವುದು. ಆ. 13ರಂದು ಬೆಳಗ್ಗೆ 7.47ಕ್ಕೆ ಗೋಣಿಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರುಗುವುದು, ಬೆಳಗ್ಗೆ 10ಕ್ಕೆ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ, ಕಳಸಾರೋಹಣ ಹಾಗೂ ಸಂಜೆ 6ಕ್ಕೆ ಪ್ರವಚನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆ.18ರಂದು ಬೆಳಗ್ಗೆ 6ಕ್ಕೆ ಗೋಣಿಬಸವೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಸಂಜೆ 5.30ಕ್ಕೆ ಗೋಣಿಬಸವೇಶ್ವರ ಮಹಾರಥೋತ್ಸವ ಜರಗುವುದು. ರಾತ್ರಿ 9ಕ್ಕೆ ಗೋಣಿಬಸವೇಶ್ವರ ನಾಟ್ಯ ಸಂಘದ ವತಿಯಿಂದ ತವರಿದ್ದರೂ ತಬ್ಬಲಿಯಾದೆ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ಜರುಗಲಿದೆ. ಆ. 19ರಂದು ಬೆಳಗ್ಗೆ 10ಕ್ಕೆ ಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಜನಪದ ಸ್ಪರ್ಧೆ, ಸಂಜೆ 5.30ಕ್ಕೆ ಕಡುಬಿನ ಕಾಳಗ, ಲಘು ರಥೋತ್ಸವ ಜರುಗುವುದು. ಮಧ್ಯಾಹ್ನ 2 ಕ್ಕೆ ಬಯಲು ಜಂಗಿ ನಿಕಾಲಿ ಕುಸ್ತಿ ಜರುಗುವದು ಎಂದು ವಿವರಿಸಿದರು.ಈ ವೇಳೆ ಕಮಿಟಿಯ ಅಧ್ಯಕ್ಷ ಲೆಂಕೆಪ್ಪ ಹೋಸಳ್ಳಿ, ಉಪಾಧ್ಯಕ್ಷ ಈರಪ್ಪ ಮಾವರಿ, ಕಾರ್ಯದರ್ಶಿ ಸಂಗಪ್ಪ ಯೋಗಿ, ಸದಸ್ಯರಾದ ಅಲ್ಲಸಾಬ, ಮುತ್ತಪ್ಪ ಹಳ್ಳಿಕೇರಿ, ಕುಮನೂರು, ಮುಂಜುನಾಥ ನಾಗಾವಿ, ಹುಚ್ಚಿರಪ್ಪ ಹರ್ತಿ, ಅಂಬರೀಶ ಜಕ್ಕಮ್ಮನವರ, ಬಸವರಾಜ ಈರಜ್ಜನವರು, ಸಿದ್ದಪ್ಪ ಸಿದ್ನೆಕೊಪ್ಪ, ಮಂಜುನಾಥ ಪೂಜಾರ, ಈರಪ್ಪ ದೊಡ್ಡಮನಿ, ಬೂದಪ್ಪ ರೂಡ್ಡನ್ನವರ, ವೀರನಗೌಡ ಪಾಟೀಲ, ಮುತ್ತಪ್ಪ ಸೋಮನಕಟ್ಟಿ, ಸುರೇಶ ಉಮ್ಮಣವರ, ಈರಪ್ಪ ದುರಗಣ್ಣವರ ಸೇರಿದಂತೆ ಮುಂತಾದವರು ಇದ್ದರು.