ಸಾರಾಂಶ
ಗೋಣಿಕೊಪ್ಪ ದುರ್ಗಾಬೋಜಿ ಸಭಾಂಗಣದಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವೀನ್ ಗಣಪತಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಂಘಟನಾ ಪರ್ವ ಮತ್ತು ಸನ್ಮಾನ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಗೋಣಿಕೊಪ್ಪ ದುರ್ಗಾಬೋಜಿ ಸಭಾಂಗಣದಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವೀನ್ ಗಣಪತಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಂಘಟನಾ ಪರ್ವ ಮತ್ತು ಸನ್ಮಾನ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಸುವೀನ್ ಗಣಪತಿ, ಕಾಂಗ್ರೆಸ್ ಸರ್ಕಾರ ಜನಪರ ನಿಲುವುಗಳನ್ನು ಹೊಂದಿರುವಂತಹ ಮುಖವಾಡವನ್ನು ತೊಟ್ಟಿದೆ. ಒಳಗಿಂದೊಳಗೆ ದಾದಾಗಿರಿಯ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರು ಇದ್ದರೂ, ಬಿಜೆಪಿ ತನ್ನ ವರ್ಚಸ್ಸನ್ನು ಕಳೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನ ಮತ್ತಷ್ಟು ಬಲಪಡಿಸಲು ಸಂಘಟಿತರಾಗುತ್ತೇವೆ. ಮತ್ತೆ ನಾವು ಆಡಳಿತ ನಡೆಸುತ್ತೇವೆ ಎಂಬ ಭರವಸೆಯನ್ನು ತುಂಬಿದರು.ಕಾಂಗ್ರೆಸ್ ಸರ್ಕಾರದ ಆಡಳಿತವಿದ್ದರೂ, ಬಿ. ಶೆಟ್ಟಿಗೇರಿ ಮತ್ತು ಬಾಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಗೆಲುವು ಸಾಧಿಸುವ ಮೂಲಕ ಬಿಜೆಪಿ ಪಕ್ಷದ ಅಸ್ತಿತ್ವ ಉಳಿಸಿದೆ. ಜತೆಗೆ ಕುಟ್ಟ, ಟಿ. ಶೆಟ್ಟಿಗೇರಿ ಪಂಚಾಯಿತಿ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬೆಳವಣಿಗೆ ಬಿಜೆಪಿ ಪಕ್ಷದ ಸಂಘಟನೆಗೆ ಶಕ್ತಿಯಾಗಿದೆ ಎಂದು ಹೇಳಿದರು.ತಾಲೂಕು ಮಂಡಳ ಬೂತ್ ಅಧ್ಯಕ್ಷರನ್ನು, ಪೊನ್ನಂಪೇಟೆ ಮಹಿಳಾ ಸಮಾಜ ಚುನಾವಣೆಯಲ್ಲಿ ಗೆಲುವು ಸಾಧಿಸಿದವರನ್ನು, ಬಾಳಲೆ, ಬಿ. ಶೆಟ್ಟಿಗೇರಿ ಫ್ಯಾಕ್ಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದವರನ್ನು, ಕುಟ್ಟ ಪಂಚಾಯಿತಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ರಾಜ ಮತ್ತು ಟಿ. ಶೆಟ್ಟಿಗೇರಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಗೌರ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ. ಸಂಘಟನಾತ್ಮಕವಾಗಿ ಬಲಹೊಂದುವ ಮೂಲಕ ಬಿಜೆಪಿಗೆ ಮತ್ತೆ ಶಕ್ತಿ ತುಂಬುವ ಕಾರ್ಯ ಪ್ರತಿಯೊಬ್ಬ ಕಾರ್ಯಕರ್ತರ ಕರ್ತವ್ಯವಾಗಬೇಕು. ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ದಾದಾಗಿರಿಯ ಆಡಳಿತಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ದೇಶ, ಧರ್ಮ, ಸಂಸ್ಕೃತಿ ವಿಚಾರಗಳನ್ನ ಮೈಗೆಡಿಸಿಕೊಂಡ ಬಿಜೆಪಿಗರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕಾರ್ಯ ಕಾಂಗ್ರೆಸ್ ಪಕ್ಷಕ್ಕೆ ಅಷ್ಟು ಸುಲಭವಾದ ವಿಚಾರವಲ್ಲ ಎಂದು ಹೇಳಿದರು.
ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಪ್ರಮುಖರಾದ ಕುಂಞಂಗಡ ಅರುಣ್ ಬೀಮಯ್ಯ, ಪಟ್ರಪಂಡ ರಘ ನಾಣಯ್ಯ, ಕಣಂಡ ಸಂಪತ್, ಬಿ.ಕೆ. ಲೋಕೇಶ, ಚಂದ್ರ, ಗುಮ್ಮಟ್ಟೀರ ಕಿಲಾನ್ ಗಣಪತಿ, ಕುಟ್ಟಂಡ ಅಜೀತ್ ಕರುಂಬಯ್ಯ, ಮುದ್ದಿಯಡ ಮಂಜು ಸೇರಿದಂತೆ ಬೂತ್ ಅಧ್ಯಕ್ಷರು ಕಾರ್ಯಕರ್ತರು ಇದ್ದರು.