ಇಂದು ಗೋಣಿಕೊಪ್ಪ ಸರ್ಕಾರಿ ಶಾಲೆ ಶತಮಾನೋತ್ಸವ ಆಚರಣೆ

| Published : Feb 02 2025, 01:01 AM IST

ಸಾರಾಂಶ

ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಭಾನುವಾರ ಬೆಳಗ್ಗೆ 10 ಗಂಟೆಗೆ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಶತಮಾನೋತ್ಸವ ಆಚರಣಾ ಸಮಿತಿ 2024-25 ಆಶ್ರಯದಲ್ಲಿ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಭಾನುವಾರ ಬೆಳಗ್ಗೆ 10 ಗಂಟೆಗೆ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ಮೆರವಣಿಗೆ ನಡೆಯಲಿದೆ. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕ ಎ.ಎಸ್.ಪೊನ್ನಣ್ಣ, ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಗೋಣಿಕೊಪ್ಪ ಸ.ಮಾ.ಪ್ರಾ.ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಆರ್.ಶಾಂತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್ ಎಂ.ಜಿ ಇತರರು ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 6.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ವೈಭವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ:

ಭಾನುವಾರ ಶಾಲೆಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಪೂರ್ವ ತಾಲೀಮು ಭರ್ಜರಿಯಾಗಿ ನಡೆಯುತ್ತಿದೆ.

ಸುಮಾರು 4 ಗಂಟೆ ಅವಧಿಯ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಹಾಸ್ಯ ಪ್ರಹಸನ, ಮೂಕಾಭಿನಯ, ಕಿರುನಾಟಕ, ಕಂಸಾಳೆ ನೃತ್ಯ, ದೇಶ ಭಕ್ತಿ ಬಿಂಬಿಸುವ ನೃತ್ಯ, ಜಾನಪದ ನೃತ್ಯ, ಗೀತ ಗಾಯನ, ಹಲವು ಆಕರ್ಷಕ ನೃತ್ಯ ಪ್ರಾಕಾರಗಳ ಹೂರಣ ತುಂಬಿದೆ.ಪ್ರಥಮ ಬಾರಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆಯ ಸುಮಾರು 40 ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 360 ವಿದ್ಯಾರ್ಥಿಗಳು ತಮ್ಮ ವಿಭಿನ್ನ ಹಾವಭಾವ, ನಟನೆ ಮೂಲಕ ಪೂರ್ಣ ಪ್ರಮಾಣದ ಮನರಂಜನೆ ನೀಡಲು ಸಜ್ಜಾಗಿದ್ದಾರೆ.

ಸೈಕ್ಲೋನ್ ತಂಡದ ಮುಖ್ಯಸ್ಥ ರಮೇಶ್, ಶಕೀಲ್ ಅಹಮ್ಮದ್ ನೃತ್ಯ ನಿರ್ದೇಶನ ತಂಡವೂ ಸುಮಾರು 16 ನೃತ್ಯ ಕಾರ್ಯಕ್ರಮಗಳಿಗೆ ತರಬೇತಿ ನೀಡುತ್ತಿದೆ. ನೃತ್ಯ ನಿರ್ದೇಶಕಿ ಲಿದಿನಾ ಅವರ ಎರಡು ವಿಭಿನ್ನ ನೃತ್ಯ ಸಂಯೋಜನೆ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಮ್ಮತ್ತಾಟ್ ಮತ್ತು ಬೊಳಕಾಟ್ ಪ್ರದರ್ಶನವಿದೆ.

ಟಿ.ಎಲ್. ಶ್ರೀನಿವಾಸ್ ನಿರ್ದೇಶನದ ‘ದಾರಿ ಯಾವುದಯ್ಯಾ?’ ಕಿರು ನಾಟಕ, ಕಾಡು ಬೆಳೆಸಿ ನಾಡು ಉಳಿಸಿ ಮೂಕಾಭಿನಯ, ಲೈನ್ ಮೆನ್ ಡ್ಯಾಡಿ, ಬನ್ನೂರು ಬಿರಿಯಾನಿ, ಉದ್ಯೋಗಸ್ಥ ಮಹಿಳೆ ಹಾಸ್ಯ ಪ್ರಹಸನ, ಕಾಡ್ಯಮಾಡ ನವೀನ್, ಸುಮನ್ ಸಹೋದರರ ಪ್ರಾಯೋಜಕತ್ವದ ವಿಕ್ರಂ ಜಾದೂಗಾರ್ ಅವರ ಜಾದೂ ಪ್ರದರ್ಶನ, 4 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ನೃತ್ಯ, ಹಿರಿಯ ವಿದ್ಯಾರ್ಥಿನಿ, ಗ್ರಾ.ಪಂ.ಸದಸ್ಯೆ ಗೀತಾ ತಂಡದ ನೃತ್ಯ, ಹಲವು ಹಿರಿಯ ವಿದ್ಯಾರ್ಥಿಗಳ ಗೀತೆಗಳು ಇನ್ನೂ ಹಲವು ವಿಭಿನ್ನ ಕಾರ್ಯಕ್ರಮ ನೀಡಲು ವೇದಿಕೆ ಸಜ್ಜಾಗಿದೆ.

ಭಾನುವಾರ ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮ ಯಶಸ್ವಿಗೊಳ್ಳಲು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ.ಮೋಹನ್ ಮತ್ತು ಪದಾಧಿಕಾರಿಗಳು, ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಶಾಲಾ ಮುಖ್ಯ ಶಿಕ್ಷಕ ಹೆಚ್.ಕೆ.ಕುಮಾರ್, ನೃತ್ಯ ನಿರ್ದೇಶಕರಾದ ರಮೇಶ್, ಶಕೀಲ್ ಅಹಮ್ಮದ್ ಮತ್ತು ತಂಡ, ಲಿದಿನಾ, ಸಮಿತಿಯ ಶಿಕ್ಷಕ ಸದಸ್ಯರಾದ ಇಂದಿರಾ, ಜೋಸ್ಲಿಲಾ, ದಮೆಯಂತಿ, ಅನಿತಾ, ಗ್ರಾ.ಪಂ.ಸದಸ್ಯರಾದ ಚೈತ್ರಾ ಬಿ.ಚೇತನ್, ರತಿ ಅಚ್ಚಪ್ಪ, ಪುಷ್ಪ, ಗೀತಾ, ಮೈಕ್ ಮಣಿ, ವಕೀಲ ಸಂಜೀವ್, ಕಾಡ್ಯಮಾಡ ಸುಮನ್ , ವೇದಿಕೆ ಸಮಿತಿ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವ ತಯಾರಿ ಬಿರುಸಿನಿಂದ ನಡೆಯುತ್ತಿರುವದಾಗಿ ಸಮಿತಿ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.