ಸಾರಾಂಶ
ಹಿರೇಕೆರೂರ: ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಉತ್ತಮ ಆರೋಗ್ಯ ಅತೀ ಅವಶ್ಯಕವಾಗಿದೆ. ಉತ್ತಮ ಆರೋಗ್ಯ ಹೊಂದಿದ ವ್ಯಕ್ತಿ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಹೇಳಿದರು.ತಾಲೂಕಿನ ಯತ್ತಿನಹಳ್ಳಿ ಎಂಕೆ ಗ್ರಾಮದಲ್ಲಿ ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್, ಹಿರೇಕೆರೂರಿನ ಮಾಗನೂರು ಹೆಲ್ತ್ ಕೇರ್ ಆಸ್ಪತ್ರೆ, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಶಿವಮೊಗ್ಗ ಹಾಗೂ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನ ಕಮೀಟಿ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆರೋಗ್ಯವಂತ ಮನುಷ್ಯ ದೇಶದ ಸಂಪತ್ತು, ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಸಣ್ಣ ಪುಟ್ಟ ಕಾಯಿಲೆಗಳನ್ನು ಅಲಕ್ಷ್ಯ ಮಾಡದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡು ಇದರಿಂದ ಮಾರಕ ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ತಡೆಗಟ್ಟಬಹುದು ಎಂದರು. ಎಂ.ಎನ್. ಬಿಲ್ಲಳ್ಳಿ ಮಾತನಾಡಿ, ಆರೋಗ್ಯವು ಮನುಷ್ಯನ ನಿಜವಾದ ಸಂಪತ್ತು. ನಮ್ಮ ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಮಾತ್ರ ನಾವು ಈ ಭೂಮಿಯ ಮೇಲೆ ಹೆಚ್ಚು ಕಾಲ ಬದುಕಿರಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.ಡಾ.ಮನು ಮಾಗನೂರ, ಲಿಂಗರಾಜ ಹುರಕಡ್ಲಿ, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ. ಶರತ್. ಸಂಗನಗೌಡರ, ಡಾ. ಅಭಿಲಾಷ್ ಡಾ. ನಿತಿನ್, ಡಾ. ಪ್ರಘ್ನ, ಡಾ. ಆರೀಫ್ ಹೊನ್ನಳ್ಳಿ ವೈದ್ಯರ ತಂಡ ಶಿಬಿರದಲ್ಲಿ ಮಧುಮೇಹ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕೀಲು ಮೂಳೆ ಪಿತ್ತಕೋಶ ಸಮಸ್ಯೆಗಳು, ದಂತ ಪರೀಕ್ಷೆ ಹಾಗೂ ಇಸಿಜಿ ಹಾಗೂ ಇಕೋ ಪರೀಕ್ಷೆಗಳನ್ನು ಮಾಡಲಾಯಿತು. ಶಿಬಿರದಲ್ಲಿ ಎತ್ತಿನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ 250 ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಇದೇ ಸಂದರ್ಭದಲ್ಲಿ 21 ಜನ ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಈ ವೇಳೆ ಮಾಜಿ ಸಚಿವ ಬಿ.ಸಿ.ಪಾಟೀಲ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಕಲ್ಲಮ್ಮನವರ, ಗ್ರಾಮದ ಶಿವಮೂರ್ತೆಪ್ಪ ಬಣಕಾರ, ಚಂದ್ರಪ್ಪ ಜವನವರ, ಭರಮಗೌಡ ಸಣ್ಣಕ್ಕಿ, ಬಸವರಾಜ ಸೋಮನಹಳ್ಳಿ, ಮೃತ್ಯುಂಜಯಪ್ಪ, ಚಂದ್ರಾಚಾರ್, ಚಂದ್ರಪ್ಪ, ವೀರಣ್ಣ, ಕಲ್ಲೂರು, ಸೇರಿದಂತೆ ಗ್ರಾಪಂ ಸದಸ್ಯರು, ಸ್ಥಳೀಯ ಭಜನಾ ಸಂಘ, ದೇವಸ್ಥಾನ ಕಮಿಟಿ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಸ್ವಯಂ ಸೇವಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.