ಸಾರಾಂಶ
ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ, ಗುಣಾತ್ಮತ ಶಿಕ್ಷಣ ನೀಡುವುದು ಇಲಾಖೆಯ ಮುಖ್ಯ ಉದ್ದೇಶ.
ಕೊಪ್ಪಳ: ಶೈಕ್ಷಣಿಕ ಗುಣಮಟ್ಟವನ್ನು ಉತ್ತಮ ಪಡಿಸಿ ಕಲಿಕಾ ವಾತವರಣ ನಿರ್ಮಿಸಿ ಇಲಾಖೆಯ ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕ ಪ್ರಗತಿಯ ಪಥದತ್ತ ಸಾಗಲು ಶಿಕ್ಷಕರು ಉತ್ತಮ ಅಭ್ಯಾಸ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಡಯಟ್ನ ಪ್ರಾಚಾರ್ಯೆ ಮೈತ್ರಾದೇವಿ ರಡ್ಡೇರ್ ಹೇಳಿದರು.
ಮುನಿರಾಬಾದ್ನ ಡಯಟ್ನಲ್ಲಿ ಏರ್ಪಡಿಸಿದ “ದಿ ಬೆಸ್ಟ್ ಪ್ರಾಕ್ಟೀಸಸ್“ ಎನ್ನುವ ಎರಡು ದಿನಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ, ಗುಣಾತ್ಮತ ಶಿಕ್ಷಣ ನೀಡುವುದು ಇಲಾಖೆಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರೌಢ ಶಾಲೆಯ ಹಾಗೂ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರು, ಅನುಷ್ಠಾನ ಅಧಿಕಾರಿಗಳು, ಶಿಕ್ಷಕರು, ಸಮುದಾಯದ ನೆರವು ಪಡೆಯಬೇಕು ಎಂದರು.ಡಯಟ್ನ ಉಪನ್ಯಾಸಕ ಮಹಾಂತೇಶ ಅರಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೋಡಲ್ ಅಧಿಕಾರಿ ಕಂಠೆಪ್ಪ ಕಟ್ಟಿಮನಿ, ಜಿಲ್ಲೆಯಲ್ಲಿ ಅನೇಕ ಶಿಕ್ಷಕರು ಸಮುದಾಯದ ಸಹಭಾಗಿತ್ವದೊಂದಿಗೆ ಶ್ರಮಿಸಿ ಮಾದರಿ ಶಾಲೆಗಳನ್ನಾಗಿ ಮಾಡಿದ್ದಾರೆ. ಅಂತಹ ಶಾಲೆಗಳಲ್ಲಿ ಕೊಪ್ಪಳ ತಾಲೂಕಿನ ಉಪಲಾಪುರ ಶಾಲೆ, ಕೊಪ್ಪಳದ ಶ್ರೀಶೈಲ ನಗರದ ಶಾಲೆ, ಕುಷ್ಟಗಿ ತಾಲೂಕಿನ ಶಾಖಾಪುರ ಶಾಲೆಗಳು ಉದಾಹರಣೆಗಳಾಗಿವೆ. ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಲಿ ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಶರಣಪ್ಪ ತೆಮ್ಮಿನಾಳ, ಹನುಮಂತಪ್ಪ ಕುರಿ ವಿಷಯ ಕುರಿತು ಚರ್ಚಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಕಲೀಮ್ ಶೇಖ್ ಮತ್ತಿತರರು ಉಪಸ್ಥಿತರಿದ್ದರು. ರೇವಣಸಿದ್ದಪ್ಪ ಕೋಳೂರು ಪ್ರಾರ್ಥಿಸಿದರು. ಶರಣಪ್ಪ ರಡ್ಡೇರ್ ವಂದಿಸಿದರು.