ಸಾರಾಂಶ
ಹೊಸದುರ್ಗ: ಇನ್ನೆರೆಡು ತಿಂಗಳಲ್ಲಿ ನಾನು ಯಾವ ಪಕ್ಷಕ್ಕೆ ಸೇರಬೇಕು ಎನ್ನುವ ತೀರ್ಮಾನ ಮಾಡಲಿದ್ದೇನೆ. ಅಲ್ಲಿಯವರೆಗೆ ನನ್ನ ಕಾರ್ಯಕರ್ತರು ಯಾವುದೇ ಪಕ್ಷದ ಸದಸ್ಯತ್ವ ಪಡೆಯಬಾರದು ಎಂದು ಮಾಜಿ ಸಚಿವ ಗೂಳೀಹಟ್ಟಿ ಶೇಖರ್ ಮನವಿ ಮಾಡಿದ್ದಾರೆ.
ಈ ಕುರಿತು ಆಡಿಯೋವೊಂದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಅವರು, ಚುನಾವಣೆಯಲ್ಲಿ ಚಿನ್ಹೆ ಮುಖ್ಯ. ಪಕ್ಷೇತರರಾಗಿ ನಿಂತರೆ ಮತದಾನ 15 ದಿನಗಳಿದ್ದಾಗ ಚಿನ್ಹೆ ಸಿಗುತ್ತದೆ. ಮತದಾರರಿಗೆ ಚಿನ್ಹೆಗಳ ಪರಿಚಯಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಾರ್ಟಿ ( ಸೈಕಲ್) ಹಾಗೂ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಬುಕ್)ಯೊಂದಿಗೆ ಮಾತುಕತೆ ನಡೆಸಿದ್ದು ಒಂದೆರೆಡು ತಿಂಗಳಲ್ಲಿ ಅಂತಿಮವಾಗಲಿದೆ ಎಂದರು.
ಮುಂಬರು ತಾಪಂ ಹಾಗೂ ಜಿಪಂ ಚುನಾವಣೆಗಳನ್ನು ಅದೇ ಚಿನ್ಹೆ ಅಡಿಯಲ್ಲಿ ನಮ್ಮ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಲಾಗುತ್ತದೆ. ನನಗೆ ನ್ಯಾಷನಲ್ ಪಾರ್ಟಿಯ ಸೇರ್ಪಡೆಗೆ ಅವಕಾಶವಿದೆಯಾದರೂ ಸ್ಥಳೀಯ ಮುಖಂಡರು ಬಿಡುವುದಿಲ್ಲ. ಹಾಗಾಗಿ ನಮಗೆ ನ್ಯಾಷನಲ್ ಪಾರ್ಟಿಗಳ ಸಹವಾಸ ಬೇಡ ಪ್ರಾದೇಶಿಕ ಪಕ್ಷಗಳಲ್ಲಿಯೇ ನಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳೋಣ ಎಂದು ತಿಳಿಸಿದ್ದಾರೆ.
ಈಗಾಗಲೇ ಎಲ್ಲಾ ಪಕ್ಷಗಳಲ್ಲಿ ಸದಸ್ಯತ್ವ ನೊಂದಣಿ ಮಾಡಿಕೊಳ್ಳಲಾಗುತ್ತಿದೆ . ಹಾಗಾಗಿ ನಮ್ಮ ನಿಷ್ಠಾವಂತ ಕಾರ್ಯಕರ್ತರು ಯಾವುದೇ ಪಕ್ಷದಲ್ಲಿ ಸದಸ್ಯತ್ವ ಪಡೆಯಬೇಡಿ. ಈಗಾಗಲೇ ಹೋಗಿರುವವರು ಹೋಗಲಿ ಅಭ್ಯಂತರವಿಲ್ಲ. ಉಳಿದವರು ಗೊಂದಲ ಮಾಡಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಮುಂದಿನ ಭಾನುವಾರ ನಾನು ಹೊಸದುರ್ಗಕ್ಕೆ ಬರುತ್ತೇನೆ. ಈ ಕುರಿತು ನನ್ನ ಕಾರ್ಯಕರ್ತರೊಂದಿಗೆ ಸಭೆ ಮಾಡುತ್ತೇನೆ. ನಮ್ಮನ್ನು ಬಿಟ್ಟು ತಾಲೂಕಿನಲ್ಲಿ ಯಾವುದೇ ಪಕ್ಷಗಳೂ ಚುನಾವಣೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ಕೆಲವರು ನಮ್ಮ ಪೋಟೋಗಳನ್ನು ಬೇರೆಯವರ ಜತೆ ಹಾಕಿಕೊಳ್ಳುತ್ತಿದ್ದಾರೆ. ಇದಕ್ಕೆ ನನ್ನ ಆಕ್ಷೇಪಣೆಯಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಬೇರೆ ನಾಯಕರ ಜತೆ ನಮ್ಮ ಪೋಟೋ ಬಳಸಬಾರದು. ಕೇವಲ ನಮ್ಮ ಕಾರ್ಯಕರ್ತರಿರುವ ಬ್ಯಾನರ್ ಗಳಲ್ಲಿ ಮಾತ್ರ ನಮ್ಮ ಪೋಟೋ ಬಳಸಬೇಕು ಎಂದು ತಿಳಿಸಿದ್ದಾರೆ.