ರಾಮನ ಹೆಸರೆಂದ್ರೆ ಸರ್ಕಾರಕ್ಕೆ ಅಲರ್ಜಿ : ಬಿವೈವಿ

| N/A | Published : May 25 2025, 11:52 PM IST / Updated: May 26 2025, 07:03 AM IST

BY Vijayendra

ಸಾರಾಂಶ

ರಾಮನಗರದ ಹೆಸರು ಬದಲಾವಣೆ ಮಾಡಲಾಗಿದೆ. ಯಾರ್ಯಾರು ಅಲ್ಲಿ ಎಷ್ಟೆಷ್ಟು ಸೈಟ್ ಮಾಡಿದ್ದಾರೆ ಗೊತ್ತಾಗಲಿ ಮೊದಲು. ನಂತರ ಹೆಸರು ಬದಲಾವಣೆಯ ಅಸಲಿ ಕಥೆ ಸ್ಪಷ್ಟವಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು

 ಮೈಸೂರು : ರಿಯಲ್ ಎಸ್ಟೇಟ್ ಗಾಗಿ ರಾಮನಗರದ ಹೆಸರು ಬದಲಾವಣೆ ಮಾಡಲಾಗಿದೆ. ರಾಮ ಅಂಥ ಹೆಸರು ಇರುವುದು ಸರ್ಕಾರಕ್ಕೆ ಅಲರ್ಜಿ ತರಿಸಿದೆ. ಯಾರ್ಯಾರು ಅಲ್ಲಿ ಎಷ್ಟೆಷ್ಟು ಸೈಟ್ ಮಾಡಿದ್ದಾರೆ ಗೊತ್ತಾಗಲಿ ಮೊದಲು. ನಂತರ ಹೆಸರು ಬದಲಾವಣೆಯ ಅಸಲಿ ಕಥೆ ಸ್ಪಷ್ಟವಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರು ಬದಲಾವಣೆ ಮಾಡಿದ ಕೂಡಲೇ ಏನು ದಿಢೀರ್ ಬದಲಾವಣೆ ಆಗಿಬಿಡುತ್ತಾ?. ಹಾಗೇ ಬದಲಾವಣೆ ಆಗುವುದಾದರೆ ದಕ್ಷಿಣ ಜಿಲ್ಲೆ ಎಂಬುದನ್ನು ತೆಗೆದು ಬೆಂಗಳೂರು ಅಂಥ ಸೇರಿಸಿಬಿಡಿ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಏನು ರಾಜ್ಯದ ಮುಖ್ಯಮಂತ್ರಿಯಾ ಅಥವಾ ಬೆಂಗಳೂರಿನ ಮುಖ್ಯಮಂತ್ರಿಯಾ?. ಡಿ.ಕೆ.ಶಿವಕುಮಾರ್ ಹೇಗೆ ಒಬ್ಬರೇ ಇದರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಇದೆ. ರಿಯಲ್ ಎಸ್ಟೇಟ್ ಗಾಗಿಯೇ ಹೆಸರು ಬದಲಾವಣೆ ಆಗಿದೆ ಎಂದರು.

ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿರುವ ಸತ್ಯ ನೋಡಿ ಸಿದ್ದರಾಮಯ್ಯ ಕಂಗಲಾಗಿದ್ದಾರೆ. ಸರ್ಕಾರ ಇನ್ನೂ ಮೂರು ವರ್ಷದಲ್ಲಿ ಇನ್ನಷ್ಟು ತಪ್ಪುಗಳನ್ನು ಮಾಡಲಿ. ಆಗ ಆ ಚಾರ್ಜ್‌ಶೀಟ್ ಕೂಡ ಬೆಳೆಯುತ್ತದೆ ಎಂದು ಅವರು ತಿಳಿಸಿದರು.ಸಭೆಗೆ ಗೈರಾಗಿದ್ದು ಯಾಕೆ?:

ನೀತಿ ಆಯೋಗದ ಸಭೆಗೆ ಗೈರಾಗಿದ್ದ ಬಗ್ಗೆ ರಾಜ್ಯ ಜನತೆಗೆ ಸಿಎಂ ತಿಳಿಸಬೇಕು. ಸಭೆಗೆ ಗೈರಾಗುವ ಮೂಲಕ ಅವರು ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೂಡ ಭಾಗವಹಿಸಿದ್ದರು. ಆದರೆ, ನಮ್ಮ ಸಿಎಂ ಸಭೆಗೆ ಯಾಕೆ ಬಹಿಷ್ಕಾರ ಹಾಕಿದ್ದರು ಎಂಬುದನ್ನು ತಿಳಿಸಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಆದರೆ, ಪ್ರಧಾನ ಮಂತ್ರಿಗಳು ಕರೆದ ಸಭೆಗೆ ಗೈರಾಗುತ್ತಾರೆ. ರಾಜಕಾರಣ ಮಾಡುವುದೇ ರಾಜ್ಯ ಸರ್ಕಾರದ ಆದ್ಯತೆಯಾಗಿದೆ. ಸಿಎಂ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರದ ಜೊತೆ ಸಂಘರ್ಷದ ಹಾದಿ ತುಳಿದಿದ್ದಾರೆ. ಸಭೆಗೆ ಗೈರಾಗಿದ್ದು ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದರು.ತಮನ್ನಾ ನೇಮಕಕ್ಕೆ

ಸೂಚಿಸಿದ ತಜ್ಞ ಯಾರು?

ಮೈಸೂರು ಸ್ಯಾಂಡಲ್‌ ಸೋಪ್‌ಗೆ ನಟಿ ತಮನ್ನಾ ಭಾಟಿಯಾ ಹೆಸರನ್ನು ಸೂಚಿಸಿದ ತಜ್ಞ ಯಾರು ಮೊದಲು ಹೇಳಿ. ಬರಿ ತಜ್ಞರು ಎಂದು ಹೆಸರು ಹೇಳಬೇಡಿ. ನಮಗೆ ಅವರ ಹೆಸರು ಬೇಕಿದೆ. ಜಮೀರ್ ಅಹಮದ್ ಹೇಳಿದ್ರಾ ಅಥವಾ ಇನ್ಯಾರು ಹೇಳಿದ್ರು. ತಮನ್ನಾರನ್ನು ರಾಯಭಾರಿ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು?. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮಾಡಿದ ಕನ್ನಡಿಗರು ಇರಲಿಲ್ವಾ? ಎಂದು ಅವರು ಪ್ರಶ್ನಿಸಿದರು.

Read more Articles on