ಸಾರಾಂಶ
ಭಾಗ್ಯನಗರದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸುವುದು ತೀರಾ ಅಗತ್ಯವಾಗಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿಯೇ ನೂರಕ್ಕೆ ನೂರು ಪದವಿ ಕಾಲೇಜು ಪ್ರಾರಂಭಿಸುವುದು ಗ್ಯಾರಂಟಿ.
ಕಾರ್ಮಿಕರ ಸರ್ಕಲ್ನಲ್ಲಿ ಮನವಿ ಸ್ವೀಕರಿಸಿದ ಸಚಿವರುಕನ್ನಡಪ್ರಭ ವಾರ್ತೆ ಕೊಪ್ಪಳ
ಭಾಗ್ಯನಗರದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸುವುದು ತೀರಾ ಅಗತ್ಯವಾಗಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿಯೇ ನೂರಕ್ಕೆ ನೂರು ಪದವಿ ಕಾಲೇಜು ಪ್ರಾರಂಭಿಸುವುದು ಗ್ಯಾರಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿ ಹೇಳಿದ್ದಾರೆ.ನಗರದ ಕಾರ್ಮಿಕರ ವೃತ್ತದಲ್ಲಿ ಭಾಗ್ಯನಗರ ಗ್ರಾಮಸ್ಥರಿಂದ ಮನವಿ ಸ್ವೀಕಾರ ಮಾಡಿ ಮಾತನಾಡಿದರು.
ಕಾಲೇಜು ಪ್ರಾರಂಭಿಸಬೇಕು ಎನ್ನುವ ನಿಮ್ಮ ಬೇಡಿಕೆ ಮನವರಿಕೆಯಾಗಿದೆ. ಖಂಡಿತವಾಗಿಯೂ ಈ ದಿಸೆಯಲ್ಲಿ ಸರ್ಕಾರದ ಹಂತದಲ್ಲಿ ನಾನು ಪ್ರಯತ್ನ ಮಾಡುತ್ತೇನೆ. ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚೆ ಮಾಡಿ, ಆದಷ್ಟು ಬೇಗನೆ ಸರ್ಕಾರಿ ಪದವಿ ಕಾಲೇಜು ಪ್ರಾರಂಭಿಸುವಂತೆ ಮನವರಿಕೆ ಮಾಡಿಕೊಡುತ್ತೇನೆ ಎಂದಿದ್ದಾರೆ.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಸಹ ಮನವಿ ಸ್ವೀಕಾರ ಮಾಡಿ, ನಾನು ಭಾಗ್ಯನಗರದಲ್ಲಿ ಸರ್ಕಾರಿ ಪದವಿ ಕಾಲೇಜು ಪ್ರಾರಂಭಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತೇನೆ, ಗ್ರಾಮದ ಬೇಡಿಕೆಯನ್ನು ಖಂಡಿತವಾಗಿಯೂ ಸರ್ಕಾರಕ್ಕೆ ತಲುಪಿಸಿ, ಸರ್ಕಾರದಿಂದ ಮಂಜೂರಾತಿಗೆ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.ಮನವಿ:
ಭಾಗ್ಯನಗರದಲ್ಲಿರುವ 4 ಪಿಯುಸಿ ಕಾಲೇಜುಗಳಿಂದ ಪ್ರತಿ ವರ್ಷ ಅಂದಾಜು 700 ವಿದ್ಯಾರ್ಥಿಗಳು ಉತ್ತೀರ್ಣವಾಗುತ್ತಿದ್ದಾರೆ. ಆದರೆ, ಇವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆ ಇಲ್ಲಿ ಸರ್ಕಾರಿ ಪದವಿ ಕಾಲೇಜನ್ನು ಪ್ರಾರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಭಾಗ್ಯನಗರದ ನಾಗರಿಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪ್ರಮುಖರಾದ ಕೃಷ್ಣ ಇಟ್ಟಂಗಿ, ಹಿರಿಯರಾದ ಆರ್.ಬಿ. ಪಾನಘಂಟಿ ವಿವರಿಸಿದರು.ಭಾಗ್ಯನಗರ ಪಪಂ ಅಧ್ಯಕ್ಷರ ತುಕಾರಾಮಪ್ಪ ಗಡಾದ, ಉಪಾಧ್ಯಕ್ಷ ಹೊನ್ನೂರ ಸಾಬ್ ಬೈರಾಪುರ, ದಾನಪ್ಪ ಕವಲೂರು, ಪ್ರಹ್ಲಾದ ಅಗಳಿ, ಡಾ. ಕೊಟ್ರೇಶ ಶೇಡ್ಮಿ, ನಿವೃತ್ತ ಉಪನ್ಯಾಸಕ ಡಿ.ಎಂ. ಬಡಿಗೇರ ಇತರರಿದ್ದರು.