ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕೃಷಿಯನ್ನು ಹೆಚ್ಚು ಪ್ರೋತ್ಸಾಹಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಇದೇ ಪ್ರಥಮ ಬಾರಿಗೆ ಅತಿ ಹೆಚ್ಚಿನ ಅನುದಾನವನ್ನು ಮೀಸಲಾಗಿರಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯದ ಸದ್ಬಳಕೆ ಮೂಲಕ ರೈತವರ್ಗ ಆರ್ಥಿಕವಾಗಿ ಸಬಲರಾಗುವಂತೆ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ಸಾಲೂರು ರಸ್ತೆಯಲ್ಲಿನ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಪರಿಶಿಷ್ಟ ವರ್ಗದವರಿಗೆ ಕೃಷಿಗೆ ಪೂರಕವಾದ ವಿವಿಧ ಸಲಕರಣೆ, ಸೌಲಭ್ಯ ವಿತರಿಸಿ ಅವರು ಮಾತನಾಡಿದರು.
2019-20 ನೇ ಸಾಲಿನಲ್ಲಿ ಭಾರತ ಸಂವಿಧಾನದ ಅನುಚ್ಚೇದ 275(1) ರ ಅಡಿಯಲ್ಲಿ ಹಾಗೂ ಕೇಂದ್ರದ ವಿಶೇಷ ನೆರವಿನಡಿಯಲ್ಲಿ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಸರಕು ಸಾಗಾಣಿಕೆ ವಾಹನ, ಟ್ಯಾಕ್ಸಿ, ಹೈನುಗಾರಿಕೆ ಕುರಿ ಮೇಕೆ ಘಟಕ, ಪಾಲಿಮೆನೆ, ಸ್ಪ್ರಿಂಕ್ಲರ್ ಸೆಟ್, ರೈನ್ ಗನ್, ಹೋಂ ಸೋಲಾರ್ ದೀಪ ವಿತರಣಾ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆ ನೇರವಾಗಿ ರೈತರಿಗೆ ತಲುಪುತ್ತಿದೆ ಎಂದರು.ಇನ್ನು, ದೇಶದಲ್ಲಿ ಶೇ.73 ಜನತೆ ಕೃಷಿ ಆಧಾರಿತ ವೃತ್ತಿಯನ್ನು ಅವಲಂಭಿಸಿದ್ದು, ಶೇ.3.5 ಜನತೆ ಸರ್ಕಾರಿ ಉದ್ಯೋಗವನ್ನು ಹಾಗೂ ಶೇ.11 ರಿಂದ 12 ಜನತೆ ಖಾಸಗಿ ಉದ್ಯೋಗದಿಂದ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿ ಪ್ರಧಾನ ದೇಶದಲ್ಲಿ ಕೃಷಿ ಆಧಾರಿತ ವೃತ್ತಿಯನ್ನು ಅವಲಂಭಿಸಿದ ಜನತೆಯ ಬದುಕು ಉಜ್ವಲಗೊಳಿ ಸುವ ದಿಸೆಯಲ್ಲಿ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕೇಂದ್ರದ ಮೋದಿ ನೇತೃತ್ವದ ಸರ್ಕಾರ 1.52 ಲಕ್ಷ ಕೋಟಿ ರು. ಕೃಷಿಗೆ ಮೀಸಲಾಗಿಟ್ಟು ರೈತರ ಉತ್ಪಾದನೆ ಹೆಚ್ಚಳದ ಮೂಲಕ ಕೃಷಿಗೆ ಪೂರಕ ವಾತಾವರಣ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, 2019-20ನೇ ಸಾಲಿನ ಅನುದಾನದಲ್ಲಿ ಇದೀಗ ಪಾಲಿಮನೆ, ಸ್ಪ್ರಿಂಕ್ಲರ್ ಸೆಟ್, ಸೋಲಾರ್ ದೀಪ, ರೈನ್ಗನ್ಗಳಿಗೆ ಶೇ.90 ಸಬ್ಸಿಡಿಯಡಿ 52 ಫಲಾನುಭವಿಗಳಿಗೆ 42.66 ಲಕ್ಷ ರು.ಮೌಲ್ಯದ ಉಪಕರಣ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮದುಸೂಧನ್ ಮಾತನಾಡಿ, ಕೃಷಿ ಪ್ರಧಾನ ದೇಶದಲ್ಲಿ ಮುಂದಿನ ಪೀಳಿಗೆಗೆ ಕೃಷಿ ಬಗ್ಗೆ ಅರಿವು ಮೂಡಿ ಸಲು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಯಂತ್ರೋಪಕರಣ ಬಳಕೆ ಹೆಚ್ಚು ಬಳಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಅರ್ಹರಿಗೆ ಸೌಲಭ್ಯವನ್ನು ಸಂಸದರು ವಿತರಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್ ಬಸವರಾಜ್,ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ,ತಾ.ಪಂ ಪ್ರಭಾರಿ ಇಒ ಕಿರಣ್ಕುಮಾರ್ ಹರ್ತಿ ಪುರಸಭಾ ಸದಸ್ಯ ಗಿರೀಶ್ ಮುಖಂಡ ವಸಂತಗೌಡ, ರುದ್ರೇಶ್, ಸಿದ್ದಲಿಂಗ ನ್ಯಾಮತಿ ಮತ್ತಿತರರು ಉಪಸ್ಥಿತರಿದ್ದರು.ಕೃಷಿ ಸಮ್ಮಾನ್ ನಿಧಿ; ಹಣ ಸಂದಾಯ ಶೀಘ್ರಸರ್ಕಾರದ ಸೌಲಭ್ಯ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಸಿದ ಸಂಸದ ಬಿ.ವೈ.ರಾಘವೇಂದ್ರ, ಕೇಂದ್ರ ಸರ್ಕಾರ ರಾಸಾಯನಿಕ ಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಬಾಬ್ತು ವಾರ್ಷಿಕ 2 ಲಕ್ಷ ಕೋಟಿ ರು. ಪಾವತಿಸುತ್ತಿದ್ದು, ಶೀಘ್ರದಲ್ಲಿಯೇ ಕೃಷಿ ಸಮ್ಮಾನ್ ಯೋಜನೆಯಡಿ ನೇರವಾಗಿ ಫಲಾನುಭವಿಗಳ ಖಾತೆಗೆ 6 ಸಾವಿರ ರು.ಸಂದಾಯವಾಗಲಿದೆ ಎಂದರು.