ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಅನೇಕ ವರ್ಷಗಳಿಂದ ನಗರದ ಬಡಕುಟುಂಬವೊಂದಕ್ಕೆ ಸೇರಿದ ಅಣ್ಣ, ತಂಗಿ ಇಬ್ಬರು ಪಾಳುಬಿದ್ದ ಅತಂತ್ರ ಸ್ಥಿತಿಯ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಕೂಡಲೇ ಸರ್ಕಾರ ನೆರವಿಗೆ ಬರುವ ಮೂಲಕ ಅವರಿಗೆ ವಸತಿ ಹಾಗೂ ಇತರೆ ಮೂಲಸೌಕರ್ಯ ಕಲ್ಪಿಸುವಂತೆ ಮಾಜಿ ಪುರಸಭೆ ಸದಸ್ಯ ಮನುಮಹೇಶ್ ಹಾಗೂ ಇತರೆ ಅನೇಕ ಮಂದಿ ನಾಗರಿಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪಟ್ಟಣದ 14ನೇ ವಾರ್ಡ್ನಲ್ಲಿ ಬಡಕುಟುಂಬಕ್ಕೆ ಸೇರಿದ್ದ ಸೀತಾಲಕ್ಷ್ಮಿ ಮತ್ತು ರಾಮಾಂಜಿ ಎಂಬ ಅಣ್ಣ ತಂಗಿ ವಾಸಿಸುತ್ತಿದ್ದು, ಕಲ್ಲುಬಂಡೆ ಹಾಗೂ ತಗಡಿನ ಸೀಟು ಹೊದಿಕೆಯ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೇ ದೀಪದ ಬೆಳಕಿನಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಹಾವು ಚೇಳುಗಳು ಇವರಿಗೆ ಸ್ನೇಹಿರಂತಾಗಿವೆ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.ಈ ಸಂಬಂಧ ಮಾಜಿ ಪುರಸಭೆ ಸದಸ್ಯ ಮನು ಮಹೇಶ್ ಮಾತನಾಡಿ, ಬಡವರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆ ರೂಪಿಸಿದೆ ಎಂದು ಹೇಳುತ್ತಿದೆ. ಇಂತಹ ಆಧುನಿಕ ಕಾಲ ಘಟ್ಟದಲ್ಲಿ ಸಹ ಬಡವರು ಅತಂತ್ರ ಸ್ಥಿತಿಯ ಮನೆಗಳಲ್ಲಿ ವಾಸಿಸುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ವಾರ್ಡ್ವೊಂದರಲ್ಲಿ ಬಡ ಕುಟುಂಬ ವರ್ಗಕ್ಕೆ ಸೇರಿದ ಅಣ್ಣ ತಂಗಿ ಹಳೇ ಕಾಲಘಟ್ಟದ ಕಲ್ಲು ಬಂಡೆಯಿಂದ ಸುತ್ತವರಿದ ಅತಂತ್ರ ಸ್ಥಿತಿಯ ಸೂರಿನಡಿ ವಾಸಿಸುವ ಸನ್ನಿವೇಶ ಮನಕರಗುವಂತಿದೆ.ಈ ಒಂದು ಹಳೇ ಪಾಳುಬಿದ್ದ ಮನೆಯಲ್ಲಿ ಹಂದಿ ಮತ್ತು ನಾಯಿಗಳು ಸಹ ವಾಸಿಸಲು ಯೋಗ್ಯವಿಲ್ಲ. ಈ ಸಹೋದರ ಮತ್ತು ಸಹೋದರಿಯ ಸ್ಥಿತಿ ನೋಡಿದರೆ ಕರುಳು ಕಿತ್ತು ಬರುವಂತಿದೆ. ಇವರಿಗೆ ತಂದೆ-ತಾಯಿ ಇಲ್ಲ, ಅಡಿಗೆ ಮಾಡಿ, ಊಟ ಮಾಡಲು ಸ್ಥಳವಿಲ್ಲ. ಮಳೆ ಬಂದರೆ ಸಾಕು ಮನೆಪೂರಾ ನೀರು ಅವೃತ್ತವಾಗಿ ಇರಲು ಸಾಧ್ಯವಿಲ್ಲದಂತಹ ಸ್ಥಿತಿ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಮನವಿ ಮಾಡಿದರೂ ಇಲಾಖೆಯ ಸ್ಪಂದನೆ ಸಿಕ್ಕಲ್ಲ.ಇದು ಇವರಿಗೆ ದೇವರ ಶಿಕ್ಷೆಯೋ ಅಥವಾ ಸರ್ಕಾರದ ಶಿಕ್ಷೆಯೋ ಅರ್ಥವಾಗುತ್ತಿಲ್ಲ. ಸಮಸ್ಯೆ ಗಂಭೀರವಾಗಿ ಪರಿಗಣಿಸಿ, ನೆರವಿಗೆ ಬರುವ ಮೂಲಕ ಕೂಡಲೇ ಈ ಬಡ ನಿರ್ಗತಿಕರಿಗೆ ಸರ್ಕಾರದಿಂದ ವಸತಿ ಇತರೆ ಮೂಲಭೂತ ಸೌಲಭ್ಯದೊಂದಿಗೆ ಅಶ್ರಮ ಕಲ್ಪಿಸುವಂತೆ ಸಂಸದ, ಶಾಸಕ ಹಾಗೂ ಸಂಘಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ.
ಕೋಟ್..ನಮಗೆ ಯಾವುದೇ ರೀತಿಯ ಸೌಲಭ್ಯಗಳು. ಮನೆಯ ಮೇಲ್ಛಾವಣಿ ಸಹ ಇಲ್ಲ. ಈ ಹಿಂದೆ ನಮ್ಮ ಬಂಗಾರದ ಆಭರಣಗಳು ಕಳುವಾದವು. ಅವರಿಗೆ ನಮಗಿಂತ ಕಟ್ಟ ಪರಿಸ್ಥಿತಿ ಇತ್ತು ಎಂದು ಸುಮ್ಮನಾದೇವು. ಯಾವುದೇ ಅಧಿಕಾರಿಗಳ ಬಳಿ ಹೋಗುವ ಶಕ್ತಿ ನಮಗಿಲ್ಲ. - ರಾಮಾಂಜಿ.