ಸಾರಾಂಶ
ಗುರುವಾರ ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ರಾಜಸ್ವ ನೀರಿಕ್ಷಕ ಎಂ.ಪಿ.ರವಿಕುಮಾರ್ ಹಾಗೂ ತಾಲೂಕು ಸರ್ವೇಯರ್ ಎಂ.ಎಸ್.ಬೀರೇಶ್ ನೇತೃತ್ವದಲ್ಲಿ ಗುರುವಾರ ಸರ್ವೇ ಕಾರ್ಯ ಮಾಡಿದ ಅಧಿಕಾರಿಗಳು ಒತ್ತುವರಿಯಾಗಿದ್ದ ಹಳ್ಳವನ್ನು ತೆರವುಗೊಳಿಸಿದರು. ಸುಮಾರು ಒಂದು ಎಕರೆಯಷ್ಟು ಸರ್ಕಾರಿ ಜಾಗವನ್ನು ವಶಕ್ಕೆ ಪಡೆಯಲಾಯಿತು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕೆಂಬೂತಗೆರೆ ಗ್ರಾಮದ ಸರ್ವೇ ನಂ.106 ರಿಂದ 192 ರವರೆಗೆ ಒತ್ತುವರಿಯಾಗಿದ್ದ ಸರ್ಕಾರಿ ಹಳ್ಳವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದರು.ಗ್ರಾಮದ ಸರ್ವೇ ನಂ.156ರಿಂದ ಕೆರೆಯ ಕೋಡಿ ಹಳ್ಳವು ಸರ್ವೇ ನಂ.185 ರಿಂದ 162ರವರೆಗೆ ಹಾಗೂ 105 ರಿಂದ 107ರವರೆಗೆ ಹಾದು ಹೋಗಿತ್ತು. ಈ ಮಧ್ಯೆ ಕಳೆದ ಹಲವು ವರ್ಷಗಳಿಂದ ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಹೀಗಾಗಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದ್ದರು.
ಗುರುವಾರ ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ರಾಜಸ್ವ ನೀರಿಕ್ಷಕ ಎಂ.ಪಿ.ರವಿಕುಮಾರ್ ಹಾಗೂ ತಾಲೂಕು ಸರ್ವೇಯರ್ ಎಂ.ಎಸ್.ಬೀರೇಶ್ ನೇತೃತ್ವದಲ್ಲಿ ಗುರುವಾರ ಸರ್ವೇ ಕಾರ್ಯ ಮಾಡಿದ ಅಧಿಕಾರಿಗಳು ಒತ್ತುವರಿಯಾಗಿದ್ದ ಹಳ್ಳವನ್ನು ತೆರವುಗೊಳಿಸಿದರು. ಸುಮಾರು ಒಂದು ಎಕರೆಯಷ್ಟು ಸರ್ಕಾರಿ ಜಾಗವನ್ನು ವಶಕ್ಕೆ ಪಡೆಯಲಾಯಿತು.ರಾಜಸ್ವ ನಿರೀಕ್ಷಕ ಎಂ.ಪಿ.ರವಿಕುಮಾರ್ ಮಾತನಾಡಿ, ಗ್ರಾಮಸ್ಥರ ದೂರಿನ ಮೇರೆಗೆ ಸರ್ವೇ ಅಧಿಕಾರಿಗಳೊಂದಿಗೆ ಭೇಟಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದೆವು. ತಹಸೀಲ್ದಾರ್ ಆದೇಶದಂತೆ ಒತ್ತುವರಿಯಾಗಿದ್ದ ಸುಮಾರು 1 ಎಕರೆಯಷ್ಟು ಸರ್ಕಾರಿ ಹಳ್ಳವನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಹತ್ತಾರು ವರ್ಷಗಳಿಂದ ಒತ್ತುವರಿಯಾಗಿದ್ದ ಸರ್ಕಾರಿ ಹಳ್ಳದ ತೆರವಿನಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮದ ಮುಖಂಡರಾದ ಜಯರಾಮು, ಸಿಂಪ್ರೇಗೌಡ, ನಾಗೇಗೌಡ, ಎಚ್.ಸಿ.ಚಿಕ್ಕಣ್ಣಗೌಡ, ಮನುಕುಮಾರ್, ನಾಗರಾಜು ತಿಳಿಸಿದರು.ಗ್ರಾಮಾಂತರ ಪೊಲೀಸರು ಭದ್ರತೆ ಕಲ್ಪಿಸಿದರು.