ಸಾರಾಂಶ
ಚಾಮರಾಜನಗರ: ತಾಲೂಕಿನ ಉಡಿಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಅಂಗವಾಗಿ ವಿದ್ಯಾರ್ಥಿಗಳನ್ನು ಎತ್ತಿನಗಾಡಿ ಹಾಗೂ ಆಟೋಗಳಲ್ಲಿ ಮೆರವಣಿಗೆ ಮಾಡಿ, ಶಾಲೆಗೆ ಕರೆತರುವ ಮೂಲಕ ಗುಲಾಬಿ ಹೂ, ಸಿಹಿ ನೀಡಿ ಸ್ವಾಗತಿಸಲಾಯಿತು.
ಶಾಲೆಯ ಎಲ್ಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ, ಆವರಣವನ್ನು ಶುಚಿಗೊಳಿಸಿ, ಬಣ್ಣ ಬಣ್ಣದ ರಂಗೋಲಿಯನ್ನು ಬಿಟ್ಟು, ಬಾಳೆ ಕಂದು, ಮಾವಿನ ತೋರಣ ಹಾಕಿ ಆವರಣದಲ್ಲಿ ಸರಸ್ವತಿ ಪೋಟೋ ಇಟ್ಟು ಪೂಜೆ ಸಲ್ಲಿಸಿ, ಶಿಕ್ಷಕಕರು ವಿದ್ಯಾರ್ಥಿಗಳನ್ನು ಬರ ಮಾಡಿಕೊಂಡರು.ಮಕ್ಕಳಿಗೆ ಮಧ್ಯಾಹ್ನ ಬೂಂದಿ ಹಾಗೂ ಪಾಯಸ ಊಟವನ್ನು ಹಾಕಲಾಯಿತು. ಒಂದು ರೀತಿಯಲ್ಲಿ ಶಾಲೆ ಪ್ರಾರಂಭೋತ್ಸವವನ್ನು ಹಬ್ಬದ ಮಾದರಿಯಲ್ಲಿ ಮಾಡಲಾಯಿತು. ಕ್ಷೇತ್ರದ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೀವ್ ಮಕ್ಕಳಿಗೆ ಗುಲಾಬಿ ಹೂ ನೀಡಿ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರದ ನಿಯಮದ ಪ್ರಕಾರ ಶಾಲೆ ಪ್ರಾರಂಭವಾದ ದಿನದಿಂದಲೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ನೀಡಲಾಗುತ್ತಿದೆ. ಶಿಕ್ಷಕರು ಮಕ್ಕಳು ಖುಷಿಯಿಂದ ಶಾಲೆಗೆ ಬರುವಂತಹ ವಾತವರಣವನ್ನು ನಿರ್ಮಾಣ ಮಾಡಬೇಕು. ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ದಾಖಲು ಮಾಡುವಂತಾಗಬೇಕು ಎಂದರು.ಸರ್ಕಾರಿ ಶಾಲೆಯಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬುದಕ್ಕೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫಲಿತಾಂಶ ಖಾತರಿಯಾಗಿದೆ. ಅಲ್ಲದೇ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬಿಸಿಯೂಟ, ಹಾಲು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ಗುಣಮಟ್ಟದ ಪಾಠ ಮಾಡುವ ಶಿಕ್ಷಕರು ನಮ್ಮಲ್ಲಿದ್ದಾರೆ. ಹೀಗಾಗಿ ಪೋಷಕರು ಸಹ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬೇಕೆಂದು ತಿಳಿಸಿದರು. ಎಸ್ಡಿಎಂಸಿ ಅಧ್ಯಕ್ಷರಾದ ದೇವಣ್ಣ, ಮಹದೇವಸ್ವಾಮಿ, ಬಸವಣ್ಣ ಅವರು ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿರು. ಕಾರ್ಯಕ್ರಮದಲ್ಲಿ ಉಡಿಗಾಲ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶೋಭಾ, ಶಾಲೆಯ ಮುಖ್ಯ ಶಿಕ್ಷಕರಾದ ಎಂ.ಡಿ.ಮಹದೇವಯ್ಯ, ದೊರೆಸ್ವಾಮಿ, ಪ್ರಸಾದ್, ಚನ್ನಬಸಣ್ಣ, ರೂಪ. ಶಿವಮ್ಮ, ಪದ್ಮಾವತಿ, ಸಿಆರ್ಪಿ ಸಂಪತ್ಕುಮಾರ್ ಹಾಗು ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.