ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ಸರ್ಕಾರಿ ಶಾಲೆಗಳ ಅವನತಿ ಮತ್ತು ಅಧೋಗತಿಗೆ ಶಿಕ್ಷಣ ನೀತಿಯ ಬದಲಾವಣೆ ಕಾರಣವಾಗಿದ್ದು, ವಿವೇಚನೆ ಮತ್ತು ದೂರದರ್ಶಿತ್ವದಿಂದ ನಿಯಮಗಳನ್ನು ರೂಪಿಸಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.ಗದ್ದೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಖಾಸಗಿ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಕೇಳುವವರು ಇಲ್ಲವಾಗಿದೆ. ಇದಕ್ಕೆ ಶಿಕ್ಷಣ ಇಲಾಖೆಯ ದೂರದರ್ಶಿತ್ವ ಇಲ್ಲದ ನಿಯಮವಳಿಗಳೂ ಕಾರಣ. ಅಲ್ಲದೆ ಸರ್ವಶಿಕ್ಷಣ ಅಭಿಯಾನದ ಶಾಲೆಗಳು, ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭ, ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ, ಹಿಂದುಳಿದ ವರ್ಗ ಅಲ್ಪ ಸಂಖ್ಯಾತರಿಗೆ ಕಾರ್ಮಿಕರ ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿ ಮೂಲ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಬಾರದ ಪರಿಸ್ಥಿತಿ ಇದೆ. ಈ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ಬೆರಳೆಣಿಕೆಯ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಮುಚ್ಚುವ ಭೀತಿ ಎದುರಿಸುತ್ತಿದೆ ಎಂದು ವಿ.ಪಿ.ಶಶಿಧರ್ ವಿಷಾದಿಸಿದರು.ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಇಂದು ಇಂಗ್ಲಿಷ್ ಬದುಕಿನ ಭಾಷೆಯಾಗಿದ್ದು, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಬದುಕಲು ಇಂಗ್ಲಿಷ್ ಬೇಕು. ಮೊದಲು ಚೆನೈ ದಕ್ಷಿಣ ಭಾರತವೆಂದು ಹೆಸರು ಪಡೆದಿದ್ದರೆ ಈಗ ಆ ಸ್ಥಾನವನ್ನು ಬೆಂಗಳೂರು ಪಡೆದಿದೆ ಎಂದರು. ರಾಜ್ಯದಲ್ಲಿ ಜೆ ಎಚ್ ಪಟೇಲ್ ಅವರ ಅವಧಿಯಲ್ಲಿ ಮೊರಾರ್ಜಿ ವಸತಿ ಶಾಲೆ ಆರಂಭವಾಯಿತು. ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಅಲ್ಪಸಂಖ್ಯಾತರಿಗಾಗಿ ವಸತಿ ಶಾಲೆ, ಕೋಡ್ಲಿಪೇಟೆಯಲ್ಲಿ ಮೊರಾರ್ಜಿ ವಸತಿ ಶಾಲೆ ತೆರೆಯಲಾಯಿತು ಎಂದರು. ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ಕುಮಾರ್ ಮಾತನಾಡಿ, ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಗೊಳ್ಳುತ್ತಿದ್ದು, ಇದು ಶಾಲೆಯ ಉಜ್ವಲ ಭವಿಷ್ಯಕ್ಕೆ ಮುನ್ನುಡಿಯಾಗಲೆಂದು ಹಾರೈಸಿದರು. ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಜಿ.ಪಂ.ಮಾಜಿ ಸದಸ್ಯ ಬಿ.ಬಿ.ಭಾರತೀಶ್ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ಕುಮಾರ್ ಮಾತನಾಡಿದರು.ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಟಿ.ಪಿ.ಅನಿತಾ ವಹಿಸಿದ್ದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡ ಉದ್ಘಾಟನೆ ನೆರವೇರಿಸಬೇಕಾಗಿತ್ತು. ಆದರೆ ಅವರು ಗೈರಾಗಿದ್ದು, ತಮ್ಮ ಸಂದೇಶ ಮತ್ತು ಮಕ್ಕಳಿಗೆ ಸಿಹಿ ಕಳುಹಿಸಿದರು.
ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿ.ಜಿ.ಲೋಕೇಶ್, ಪಂಚಾಯಿತಿ ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಮಂಜುಳಾ, ಗೀತಾ, ನಾಗರತ್ನ ಸುರೇಶ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಎಸ್.ಎಸ್.ಇಂಟರ್ ನ್ಯಾಷನಲ್ ಮಾಲೀಕ ಸಿನಾನ್, ಸ್ಯಾಂಡಲ್ವುಡ್ ವ್ಯವಸ್ಥಾಪಕ ಪ್ರಸನ್ನಕುಮಾರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಪ್ರಸನ್ನಕುಮಾರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಕೆ.ಬಸವರಾಜು, ಕಾಫಿ ಬೆಳೆಗಾರ ಪಟ್ಟೆಮನೆ ಉದಯಕುಮಾರ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಪಟ್ಟೆಮನೆ ನಳಿನಿ ಲೋಕೇಶ್, ಗೌರವ ಸಲಹೆಗಾರ ಬಲ್ಕಿಸ್, ವೈ.ಎಲ್.ಶ್ರೀರಾಮ್, ಗದ್ದೆಹಳ್ಳ, ವೈ.ಎಲ್.ಕೌಶಿಕ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಎಸ್.ಸುನಿಲ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು. ಜಾಗೃತಿ ಗೀತೆ, ಸಾಂಸ್ಕೃತಿಕ ಕಾರ್ಯಕ್ರಮಕಾರ್ಯಕ್ರಮದ ಮೊದಲಿಗೆ ಇ.ರಾಜು ನೇತೃತ್ವದ ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು. ಕೌಶಲ್ಯ ಮತ್ತು ತಂಡ ಪ್ರಾರ್ಥಿಸಿದರು. ಶಾಲಾ ವಿದ್ಯಾರ್ಥಿಗಳ ತಂಡದಿಂದ ಸ್ವಾಗತ ನೃತ್ಯ ನಡೆಯಿತು. ಮುಖ್ಯೋಪಾದ್ಯಾಯನಿ ಹೇಮ ಸ್ವಾಗತಿಸಿ, ಶಿಕ್ಷಕರುಗಳಾದ ಮಂಜುನಾಥ್ ಮತ್ತು ಮೀನಾ ಅವರು ನಿರೂಪಿಸಿ ವಂದಿಸಿದರು. ನಂತರ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು.