ವಿಪಕ್ಷ ಶಾಸಕರ ಕ್ಷೇತ್ರಗಳಿಗೂ ಸರ್ಕಾರ ಅನುದಾನ ನೀಡಲಿ: ಎಚ್.ಟಿ.ಮಂಜು ಆಗ್ರಹ

| Published : Jun 25 2025, 01:18 AM IST

ವಿಪಕ್ಷ ಶಾಸಕರ ಕ್ಷೇತ್ರಗಳಿಗೂ ಸರ್ಕಾರ ಅನುದಾನ ನೀಡಲಿ: ಎಚ್.ಟಿ.ಮಂಜು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

2021-22ರಲ್ಲಿ ಭಾರೀ ಮಳೆಗೆ ತಾಲೂಕಿನ ಹಲವು ಕೆರೆಗಳು ಒಡೆದು ಹೋಗಿವೆ. 40ಕ್ಕೂ ಹೆಚ್ಚು ಕಟ್ಟೆಗಳಿಗೆ ಹಾನಿಯಾಗಿದೆ. ಆದರೆ, ಸರ್ಕಾರ ಇದುವರೆಗೂ ಇವುಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಿಲ್ಲ. ಸರ್ಕಾರದ ಗಮನ ಸೆಳೆದರೂ ಸ್ಪಂದಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕಾಂಗ್ರೆಸ್ ಶಾಸಕರಿಗೆ ನೀಡುವಷ್ಟೇ ಅನುದಾನವನ್ನು ವಿಪಕ್ಷದ ಶಾಸಕರ ಕ್ಷೇತ್ರಗಳಿಗೂ ನೀಡುವಂತೆ ಶಾಸಕ ಎಚ್.ಟಿ.ಮಂಜು ಆಗ್ರಹಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, 2021-22ರಲ್ಲಿ ಭಾರೀ ಮಳೆಗೆ ತಾಲೂಕಿನ ಹಲವು ಕೆರೆಗಳು ಒಡೆದು ಹೋಗಿವೆ. 40ಕ್ಕೂ ಹೆಚ್ಚು ಕಟ್ಟೆಗಳಿಗೆ ಹಾನಿಯಾಗಿದೆ. ಆದರೆ, ಸರ್ಕಾರ ಇದುವರೆಗೂ ಇವುಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಗಮನ ಸೆಳೆದರೂ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ವಹಿಸಿ ಕೆರೆಗಳ ದುರಸ್ತಿಗೆ ಅಗತ್ಯ ಅನುದಾನ ಕೊಡಿಸಬೇಕು. ರೈತರ ಹಿತ ಕಾಯುವಂತೆ ಒತ್ತಾಯಿಸಿದರು.

ಹೇಮಾವತಿ ನೀರು ಜಿಲ್ಲೆಯ ಕೆರೆಕಟ್ಟೆಗಳಿಗೆ ಸಮರ್ಪಕವಾಗಿ ಹರಿಯುತ್ತಿಲ್ಲ. ಸರ್ಕಾರ ಹೇಮೆಯ ನೀರನ್ನು ಮಾಗಡಿ-ರಾಮನಗರಕ್ಕೆ ಕೊಂಡೊಯ್ಯವ ಯೋಜನೆ ರೂಪಿಸಲು ಮುಂದಾಗಿದೆ. ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ನನ್ನ ವಿರೋಧವಿಲ್ಲ. ಆದರೆ, ನಮ್ಮ ಭಾಗದ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.

ರೈತರಿಗೆ ಸಮರ್ಪಕ ನೀರು ಕೊಡದೆ ಹೇಮೆಯ ನೀರನ್ನು ರಾಮನಗರಕ್ಕೆ ತೆಗೆದುಕೊಂಡು ಹೋಗಲು ನನ್ನ ಆಕ್ಷೇಪವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ರೈತರ ಹಿತದ ಬಗ್ಗೆ ಚಿಂತಿಸಿ ಸರ್ಕಾರದ ನೂತನ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚಿಂತಿಸುವಂತೆ ಆಗ್ರಹಿಸಿದರು.

ಮಳೆ ಬಂದರೆ ಪಟ್ಟಣದ ಬಸ್ ನಿಲ್ದಾಣ ಕೆರೆಯಂತಾಗುತ್ತದೆ. ಬಸ್ ನಿಲ್ದಾಣದ ಅಭಿವೃದ್ಧಿಗೆ 16 ಕೋಟಿ ಹಣದ ಅಗತ್ಯವಿದೆ. ತಾಲೂಕಿನ ಪಶು ಸಂಗೋಪನಾ ಇಲಾಖೆಗೆ ಮಂಜೂರಾಗಿದ್ದ ಪಾಲಿಹೌಸ್ ನಿರ್ಮಾಣ ಜಿಲ್ಲೆಯ ಮಳವಳ್ಳಿಗೆ ಸ್ಥಳಾಂತರಗೊಂಡಿದೆ. ಇದನ್ನು ತನ್ನ ತಾಲೂಕಿಗೆ ಕೊಡಿಸುವ ಪ್ರಯತ್ನ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.

ಪಟ್ಟಣದ ಹೇಮಾವತಿ ಬಡಾವಣೆಯ 582 ನಿವೇಶನಗಳನ್ನು ಅಕ್ರಮ ಸಕ್ರಮಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಬೇಕು. ತಾಲೂಕು ವ್ಯಾಪ್ತಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಲು ಅಗತ್ಯ ಅನುದಾನ ಒದಗಿಸಬೇಕು ಎಂದು ಕೋರಿದರು.