ಸಾರಿಗೆ ನೌಕರರಿಗೆ ಸರ್ಕಾರ ಸೂಕ್ತ ಭದ್ರತೆ ನೀಡಬೇಕು- ಶಾಂತಲಿಂಗ ಶ್ರೀಗಳು

| Published : Mar 15 2025, 01:03 AM IST / Updated: Mar 15 2025, 01:04 AM IST

ಸಾರಿಗೆ ನೌಕರರಿಗೆ ಸರ್ಕಾರ ಸೂಕ್ತ ಭದ್ರತೆ ನೀಡಬೇಕು- ಶಾಂತಲಿಂಗ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರಿ ನೌಕರರಿಗೆ, ಕನ್ನಡ ಮನಸ್ಸುಗಳಿಗೆ ಸರ್ಕಾರ ಸೂಕ್ತ ಭದ್ರತೆ ಹಾಗೂ ಪ್ರತ್ಯೇಕ ಗಡಿ ನೌಕರರ ಸುರಕ್ಷತಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಆಗ್ರಹಿಸಿದರು.

ನರಗುಂದ: ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರಿ ನೌಕರರಿಗೆ, ಕನ್ನಡ ಮನಸ್ಸುಗಳಿಗೆ ಸರ್ಕಾರ ಸೂಕ್ತ ಭದ್ರತೆ ಹಾಗೂ ಪ್ರತ್ಯೇಕ ಗಡಿ ನೌಕರರ ಸುರಕ್ಷತಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಆಗ್ರಹಿಸಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿಂದಗಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಬೆಳಗಾವಿಯಲ್ಲಿ ಸಾರಿಗೆ ನಿರ್ವಾಹಕನ ಮೇಲೆ ಮರಾಠಿಗರು ದರ್ಪವನ್ನು ತೋರಿ ದೈಹಿಕ ಹಲ್ಲೆ ಮಾಡಿದ್ದರು. ಆ ಗಾಯ ಮಾಸುವ ಮುನ್ನವೆ ಮತ್ತೆ ಇದೀಗ ಬೆಳಗಾವಿ ತಾಲೂಕಿನ ಕಿಣೆ ತಿಪ್ಪಣ್ಣ ಡೋಕ್ರೆ ಎನ್ನುವ ವ್ಯಕ್ತಿ ಗ್ರಾಪಂ ವ್ಯಾಪ್ತಿಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಗ್ರಾಪಂ ಪಿಡಿಓ ನಾಗೇಂದ್ರ ಪತ್ತಾರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಮ್ಕಿ ಹಾಕಿರುವುದು ಖಂಡನೀಯವಾದುದು ಎಂದು ಹೇಳಿದರು.ಉಪನ್ಯಾಸಕ ಎಸ್.ಎಸ್. ಪೂಜಾರ ಮಾತನಾಡಿ, ಬಸವಣ್ಣನವರ ಸಮನ್ವಯ ದೃಷ್ಟಿ, ಅಲ್ಲಮ ಪ್ರಭುವಿನ ಪೂರ್ಣದೃಷ್ಟಿಗಳೆರಡರ ಸಾಕ್ಷಿ ಸಂಗಮವಾಗಿದ್ದ ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಶಿವಯೋಗಿಗಳು ಸಂತ ಶ್ರೇಷ್ಠರು. ಸಮಾಜವೆ ತಮ್ಮ ಮನೆಯೆಂದು ಭಾವಿಸಿ ತಮ್ಮ ಜೀವನದುದ್ದಕ್ಕೂ ಸಮಾಜಕ್ಕಾಗಿಯೆ ಬದುಕಿದ ಅವರ ಜೀವನವೆ ನಮಗೆ ಆದರ್ಶ. 19, 20ನೇ ಶತಮಾನದ ಅವದಿಯಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ, ನೈತಿಕ ಹಾಗೂ ಆರ್ಥಿಕ ದೀಪವನ್ನು ಹೊತ್ತಿಸಿದ್ದಾರೆಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಪ್ರೊ. ಬಿ.ಸಿ. ಹನಮಂತಗೌಡ್ರ ಮಾತನಾಡಿ, ಕರ್ನಾಟಕದ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಕರುನಾಡಿನಲ್ಲಿಯೇ ಕನ್ನಡತನವನ್ನು ಹುಡುಕುವಂತಹ ಸಂದಿಗ್ದ ಪರಿಸ್ಥಿತಿ ಬರುತ್ತದೆ. ಇದಾಗುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಮೀನಾಮೇಶ ಎಣಿಸದೇ ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರ ವಿರುದ್ದ ಕೂಡಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೋಭಾ ಆಡಿನ ಹಾಗೂ ತಾಲೂಕು ಕಸಾಪದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರೊ. ರಮೇಶ ಐನಾಪುರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ವೇದಿಕೆ ಮೇಲೆ ವಿಶ್ರಾಂತ ಉಪತಹಸೀಲ್ದಾರ್‌ ವ್ಹಿ. ಜಿ. ಐನಾಪೂರ, ಉಣಕಲ್‌ದ ಬಸಯ್ಯ ಹಿರೇಮಠ, ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ ಶಿರಹಟ್ಟಿಮಠ, ಶಾಂತಪ್ಪ ಆಡಿನ, ವೀರಯ್ಯ ವಸ್ತ್ರದ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ಆರ್. ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.