ಕೊಟ್ಟ ಮಾತಿನಂತೆ ನಡೆಯುವ ಸರ್ಕಾರ: ಶಾಸಕ

| Published : Feb 18 2024, 01:31 AM IST

ಸಾರಾಂಶ

ಈ ಹಿಂದಿನ ಸರ್ಕಾರ ಜನತೆಯ ಆಶಯಕ್ಕೆ ವಿರುದ್ದವಾಗಿ ನಡೆದುಕೊಂಡಿದ್ದರಿಂದ ಅದನ್ನು ಮನೆಗೆ ಕಳುಹಿಸಿದರು. ಕಾಂಗ್ರೆಸ್‌ ಜನತೆಯ ಸಮಸ್ಯೆಗೆ ಸ್ಪಂದಿಸುತ್ತಿದೆ. ಗುಡಿಸಲು ಮುಕ್ತ ಪಟ್ಟಣವನ್ನಾಗಿಸಲು ಬಡವರಿಗೆ ನಿವೇಶನ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರ ಕೊಟ್ಟ ಭರವಸೆಯಂತೆ ನಡೆದುಕೊಳ್ಳುವ ಮೂಲಕ ಜನರಿಗೆ ಹತ್ತಿರವಾಗುತ್ತಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಪುರಸಭಾ ವತಿಯಿಂದ ಎಸ್.ಎಫ್.ಸಿ ಮತ್ತು ೧೫ನೇ ಹಣಕಾಸು ಯೋಜನೆಯಲ್ಲಿ ವಿವಿಧ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುತ್ತಿದೆ, ಆದರೆ ಈ ಹಿಂದಿನ ಸರ್ಕಾರ ಅದಕ್ಕೆ ವಿರುದ್ದವಾಗಿ ನಡೆದುಕೊಂಡಿದ್ದರಿಂದ ಅದನ್ನು ಮನೆಗೆ ಕಳುಹಿಸಿದರು ಎಂದು ಲೇವಡಿ ಮಾಡಿದರು.

ವಿದ್ಯಾರ್ಥಿಗಳಿಗೆ ಕೈಪಿಡಿ ವಿತರಣೆ

ಪುರಸಭಾ ವತಿಯಿಂದ ೨೫೨ ವಿದ್ಯಾರ್ಥಿಗಳಿಗೆ ೨.೫೬ ಲಕ್ಷ ರೂಗಳ ವೆಚ್ಚದಲ್ಲಿ ೨೫೨ ಕೈಪಿಡಿಗಳನ್ನು ವಿತರಿಸಿದರು. ಇದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಅದೇ ರೀತಿ ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳನ್ನು ಸಹ ವಿತರಿಸಲಾಗುತ್ತಿದೆ. ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗಾಗಿ ಪರಿಹಾರ ಧನದ ಚೆಕ್ ವಿತರಿಸಿದರು.ಪುರಸಭಾ ವ್ಯಾಪ್ತಿಯಲ್ಲಿ ಗುಡಿಸಲು ಮುಕ್ತ ಪಟ್ಟಣವನ್ನಾಗಿ ರೂಪಿಸಲು ಸರ್ಕಾರ ಸಂಕಲ್ಪ ಮಾಡಿದ್ದು ಅದರಂತೆ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಾಣಕ್ಕಾಗಿ ಹಣವನ್ನು ನೀಡಲಾಗುವುದು. ನಿವೇಶನ ಇಲ್ಲದವರಿಗೆ ನಿವೇಶನ ಕೊಡಲಾಗುವುದು. ನಿವೇಶನ ಇಲ್ಲದವರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಆಸ್ತಿ ತೆರಿಗೆ ಕಟ್ಟಿ ಸಹಕರಿಸಿ

ಆಸ್ತಿ ತೆರಿಗೆ ಹಣ ಕಟ್ಟದೇ ಇರುವವರು ತಕ್ಷಣ ತೆರಿಗೆ ಕಟ್ಟಿ ಅಭಿವೃದ್ದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಪಟ್ಟಣದಲ್ಲಿ ಹಾಗೂ ತಾಲೂಕಿನಾದ್ಯಂತ ಖಾತೆ ಆಂದೋಲನ ಮಾಡುತ್ತಿದ್ದು ಎಲ್ಲರೂ ತ್ವರಿತಗತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿಕೊಳ್ಳಿ ಎಂದರು.

ವೇದಿಕೆಯಲ್ಲಿ ತಹಸಿಲ್ದಾರ್ ರಶ್ಮಿ, ಮುಖ್ಯಾಧಿಕಾರಿ ಮೀನಾಕ್ಷಿ, ಬಿಇಒ ಡಿ.ಎನ್.ಸುಕನ್ಯಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚ ಹಳ್ಳಿ ಗೋವಿಂದರಾಜಲು, ಪುರಸಭಾ ಸದಸ್ಯರುಗಳಾದ ಪರ್ಜಾನಾ ಸುಹೇಲ್, ಗಂಗಮ್ಮ, ಪೊನ್ನಿ, ರಾಕೇಶ್ ಗೌಡ, ಶಶಿ, ವೆಂಕಟೇಶ್, ಗೋವಿಂದ, ಬಾಬುಲಾಲ್, ಪ್ರಶಾಂತ್, ಸುನಿಲ್, ಸಿಡಿಪಿಒ ಮುನಿರಾಜು ಇದ್ದರು.