ಚಿಂಚೋಳಿ ತಾಲೂಕಿನ ಗಡಿ ಪ್ರದೇಶದ ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಒಂಟಿಚಿಂತಾ ತಾಂಡಾದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕರ ಆಶ್ರಮ ವಸತಿ ಶಾಲೆ ಮಕ್ಕಳ ಕೊರತೆಯಿಂದಾಗಿ ಮತ್ತು ಮಕ್ಕಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳು ಹಾಗೂ ಮೂಲಸೌಕರ್ಯಗಳು ಸಮಸ್ಯೆಯಿಂದಾಗಿ ಸರ್ಕಾರದ ನಿರ್ಲಕ್ಷತನಕ್ಕೆ ಒಳಗಾಗಿದೆ ಎಂದು ವೆಂಕಟಾಪುರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ರಾಥೋಡ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಚಿಂಚೋಳಿ ತಾಲೂಕಿನ ಗಡಿ ಪ್ರದೇಶದ ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಒಂಟಿಚಿಂತಾ ತಾಂಡಾದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕರ ಆಶ್ರಮ ವಸತಿ ಶಾಲೆ ಮಕ್ಕಳ ಕೊರತೆಯಿಂದಾಗಿ ಮತ್ತು ಮಕ್ಕಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳು ಹಾಗೂ ಮೂಲಸೌಕರ್ಯಗಳು ಸಮಸ್ಯೆಯಿಂದಾಗಿ ಸರ್ಕಾರದ ನಿರ್ಲಕ್ಷತನಕ್ಕೆ ಒಳಗಾಗಿದೆ ಎಂದು ವೆಂಕಟಾಪುರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ರಾಥೋಡ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂಡಾಗಳಲ್ಲಿ ಮೂಢನಂಬಿಕೆ, ಅನರಕ್ಷತೆ, ಬಡತನ ಇರುವುದರಿಂದ 2001ರಲ್ಲಿ ಕುಂಚಾವರಂ ಅರಣ್ಯ ಪ್ರದೇಶದ ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಇಲ್ಲಿನ ಹೆಣ್ಣುಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಕುಂಚಾವರಂ ಅಭಿವೃದ್ಧಿಗಾಗಿ 10 ಕೋಟಿ ರು. ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಅದರಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಒಂಟಿಚಿಂತಾ ಆಶ್ರಮ ವಸತಿ ಶಾಲೆ 2002-03ರಲ್ಲಿ ಹೊಸದಾಗಿ 5 ಲಕ್ಷ ರು. ವೆಚ್ಚದಲ್ಲಿ ಆಶ್ರಮ ಶಾಲೆಯ ಕಟ್ಟಡವನ್ನು ನಿರ್ಮಿಸಿ ವಸತಿ ಶಾಲೆ ಪ್ರಾರಂಭಿಸಲಾಯಿತು ಎಂದರು.

ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರ ನೇಮಿಸಲಾಯಿತು. ತಾಂಡಾದ ಬಡವರ ಮಕ್ಕಳಿಗೆ ಅಕ್ಷರ ಕಲಿಕೆ ಆಶಾಕಿರಣ ಮೂಡಿಸಿದ ಒಂಟಿಚಿಂತ ತಾಂಡಾದಲ್ಲಿ ಪ್ರಾರಂಭಿಸಿದ ಆಶ್ರಮ ವಸತಿ ಶಾಲೆಯಲ್ಲಿ 125 ಮಕ್ಕಳ ಪ್ರವೇಶ ಪಡೆದುಕೊಳ್ಳಲಾಯಿತು. ಇತ ವರ್ಷಗಳಲ್ಲಿ ಒಂಟಿಚಿಂತ ತಾಂಡಾದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಅನುಕೂಲ ಮಾಡಿ ಕೊಟ್ಟಿತು. ಕೆಲವು ವರ್ಷಗಳ ಹಿಂದೆ ಒಂಟಿಚಿಂತಾ ವಸತಿ ಶಾಲೆಯ ಶಿಕ್ಷಕರನ್ನು ಬೇರೆಡೆ ವರ್ಗಾಯಿಸಲಾಯಿತು ಎಂದು ಜೇಳಿದರು.

ಒಂಟಿಚಿಂತ ಆಶ್ರಮ ವಸತಿ ಶಾಲೆ ಹೆಸರಿಗಷ್ಟೇ ಸೀಮಿತವಾಗಿದ್ದು, ಒಂಟಿ ಚಿಂತಾ ಆಶ್ರಮ ಶಾಲೆಯಲ್ಲಿ ವಸತಿ ಶಾಲೆಯು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದೆ. ಇದರಿಂದ ಮಕ್ಕಳ ಪ್ರವೇಶಾತಿ ಮೇಲೆ ಹೊಡೆತ ಬಿದ್ದು ಶಾಲೆಯು ಮುಚ್ಚುವ ಹಂತಕ್ಕೆ ತಲುಪಿದೆ. ಶಾಲೆಯ ಮೇಲ್ವಿಚಾರಕ, ರಾತ್ರಿ ಕಾವಲುಗಾರ ಹೆಸರಿಗಷ್ಟೇ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಆದರೆ ಶಾಲೆಗೆ ಮಾತ್ರ ಭೇಟಿ ನೀಡುತ್ತಿಲ್ಲ ಎಂದು ರಾಜು ರಾಥೋಡ್ ದೂರಿದರು. ಗೋಪಾಲ್ ಜಾದವ್ ಮಾತನಾಡಿದರು.

ಒಂಟಿಚಿಂತಾ ಆಶ್ರಮ ಶಾಲೆ ಬಹಳ ಹದಗೆಟ್ಟು ಹೋಗಿದೆ. ಇದರಿಂದಾಗಿ ಮಕ್ಕಳು ಅಲ್ಲಿ ವಾಸ ಇರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಸರ್ಕಾರ ಗಡಿ ಪ್ರದೇಶದ ಮಕ್ಕಳಿಗೆ ಶಿಕ್ಷಣ ಕಲಿಕೆಗಾಗಿ ಪ್ರಾರಂಭಿಸಿದ ಶಾಲೆ ಈಗ ಮಕ್ಕಳ ಕಲಿಕೆಯಿಂದ ವಂಚಿತರಾಗಬೇಕಾಗಿದೆ. ಶಾಸಕರು ಇದರ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ವಿಷಯವ ಪ್ರಸ್ತಾಪಿಸಿ ತಾಂಡದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಒಂಟಿ ಚಿಂತ ಆಶ್ರಮ ವಸತಿ ಶಾಲೆ ಲಭ್ಯವಾಗುವಂತೆ ಮಾಡಬೇಕು ಎಂದು ವೆಂಕಟಾಪುರ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜು ರಾಥೋಡ್ ಹೇಳಿದರು.