ನಗರದಲ್ಲಿ ಆಯೋಜಿಸಿದ್ದ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರಿನ 18ನೇ ಆವೃತ್ತಿಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಚಾಲನೆ ನೀಡಿದರು.
ಬೆಂಗಳೂರು: ಮ್ಯಾರಾಥಾನ್ ಓಟ ಜನರನ್ನು ಸಂಪರ್ಕಿಸುವ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮತ್ತು ರಾಷ್ಟ್ರ ನಿರ್ಮಾಣದ ಕಡೆಗಿನ ಬಲವಾದ ಹೆಜ್ಜೆಯಾಗಿದೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಹೇಳಿದರು.
ಭಾನುವಾರ ನಗರದಲ್ಲಿ ಆಯೋಜಿಸಿದ್ದ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರಿನ 18ನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ, ಕ್ರೀಡೆ ಮತ್ತು ಸೇವೆ ಒಟ್ಟಿಗೆ ಸೇರಿದಾಗ, ಸಕಾರಾತ್ಮಕ ಬದಲಾವಣೆ ಸಂಭವಿಸುತ್ತದೆ. ಈ ಓಟದಲ್ಲಿ ಯುವಜನತೆಯ ಜೊತೆಗೆ ಅಂಗವಿಕಲರು, ಹಿರಿಯ ನಾಗರಿಕರು ಭಾಗವಹಿಸಿರುವುದು ಬಹಳ ಸಂತೋಷ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಆಂದೋಲನಕ್ಕೆ ಮ್ಯಾರಥಾನ್ ಪೂರಕವಾಗಿದೆ ಎಂದರು.ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಫಿಟ್ನೆಸ್ಗೆ ಆದ್ಯತೆ ನೀಡಬೇಕು, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆರೋಗ್ಯಕರ, ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಬೇಕೆಂದು ರಾಜ್ಯಪಾಲರು ಕರೆ ನೀಡಿದರು.
ಓಟವು ಆರೋಗ್ಯಕರ ಜೀವನಶೈಲಿ, ಶಿಸ್ತು ಮತ್ತು ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಈಗ ಬೆಂಗಳೂರಿನ ಗುರುತಾಗಿದೆ. ಈ ಓಟವನ್ನು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಓಟಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ. ಈ ಅದ್ಧೂರಿ ಯಶಸ್ವಿ ಕಾರ್ಯಕ್ರಮ ಆಯೋಜನೆಗಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಎಲ್ಲಾ ಸ್ಪರ್ಧಿಗಳು, ಸಂಘಟಕರು, ಪ್ರೊಕೆಮ್ ಇಂಟರ್ನ್ಯಾಷನಲ್ಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದರಾದ ಪಿ.ಸಿ.ಮೋಹನ್, ಯದುವೀರ್ ಕೃಷ್ಣದತ್ತ ಒಡೆಯರ್, ತೇಜಸ್ವಿ ಸೂರ್ಯ, ಶಾಸಕ ಎನ್.ಎ.ಹ್ಯಾರಿಸ್, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.