ಪದವೀಧರರಿಗೆ ವೈಟ್‌ಕಾಲರ್‌ ಸಂಸ್ಕೃತಿ ಬೇಡ: ಎಸ್‌.ಕೃಷ್ಣ ದೀಕ್ಷಿತ್‌

| Published : Oct 28 2024, 12:50 AM IST

ಸಾರಾಂಶ

ವಿದ್ಯಾರ್ಥಿಗಳು ಪದವೀಧರರಾದ ತಕ್ಷಣ ಕೆಲವರಲ್ಲಿ ಅಹಂ ಭಾವನೆ ಬಂದು ಬಿಡುತ್ತದೆ. ಅದು ಒಳ್ಳೆಯದಲ್ಲ. ಯಾರಲ್ಲಿ ವಿನಯವಂತಿಕೆ. ಪ್ರೀತಿಸುವ ಗುಣ ಇರುತ್ತದೋ ಅಂತಹವರನ್ನು ಸಮಾಜ ಅಪ್ಪಿಕೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪದವೀಧರರು ವೈಟ್ ಕಾಲರ್ ಸಂಸ್ಕೃತಿ ಬಿಟ್ಟು ವಿನಯವಂತಿಕೆ ಅಳವಡಿಸಿಕೊಂಡು ಕುಟುಂಬ ಮತ್ತು ಸಮಾಜವನ್ನು ಪ್ರೀತಿಸುವ ಕೆಲಸ ಮಾಡಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಸ್. ಕೃಷ್ಣ ದೀಕ್ಷಿತ್ ಶನಿವಾರ ಹೇಳಿದರು.

ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಿದ ನಂತರ ಘಟಿಕೋತ್ಸವ ಭಾಷಣ ಮಾಡಿದರು.

ವಿದ್ಯಾರ್ಥಿಗಳು ಪದವೀಧರರಾದ ತಕ್ಷಣ ಕೆಲವರಲ್ಲಿ ಅಹಂ ಭಾವನೆ ಬಂದು ಬಿಡುತ್ತದೆ. ಅದು ಒಳ್ಳೆಯದಲ್ಲ. ಯಾರಲ್ಲಿ ವಿನಯವಂತಿಕೆ. ಪ್ರೀತಿಸುವ ಗುಣ ಇರುತ್ತದೋ ಅಂತಹವರನ್ನು ಸಮಾಜ ಅಪ್ಪಿಕೊಳ್ಳುತ್ತದೆ ಎಂದರು.

ಪದವೀಧರರು ಸರ್ಕಾರಿ ಹುದ್ದೆಗಾಗಿ ಕಾಯದೇ ಸ್ವ- ಉದ್ಯೋಗದತ್ತ ಗಮನಹರಿಸಬೇಕು. ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಉದ್ಯೋಗದಲ್ಲಿ ತೊಡಗಿ ಬೇರೆಯವರಿಗೆ ಉದ್ಯೋಗವಕಾಶ ಕಲ್ಪಿಸುವ ಸ್ಥಿತಿಗೆ ತಲುಪಬೇಕು ಸಲಹೆ ನೀಡಿದರು.

ಶೈಕ್ಷಣಿಕ ಮೌಲ್ಯಗಳನ್ನು ಆದರಿಸಿಕೊಂಡು ಜೀವನ ನಡೆಸಬೇಕು. ಕಲಿಕೆಯೊಂದಿಗೆ ಅಧ್ಯಯನ ಮತ್ತು ಕ್ರಿಯಾಶೀಲತೆ ಬೆಳೆಸಿಕೊಂಡು ಸಮಾಜ, ಪರಿಸರ ಹಾಗೂ ಕುಟುಂಬವನ್ನು ಪ್ರೀತಿಸುವ ಗುಣ ಹೊಂದಬೇಕು. ಆಗ ಮಾತ್ರ ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಹೈಕೋರ್ಟಿನ ಮತ್ತೋರ್ವ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಮಾತನಾಡಿ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲೆ ಪೋಷಕರು ನಂಬಿಕೆ ಮತ್ತು ವಿಶ್ವಾಸದೊಂದಿಗೆ ಶಿಕ್ಷಣ ನೀಡುವ ಮೂಲಕ ತಮ್ಮ ಮಕ್ಕಳು ಉತ್ತಮ ಪ್ರಜೆಗಳಾಗಲಿ ಎಂದು ಬಯಸುತ್ತಾರೆ. ವಿದ್ಯಾರ್ಥಿಗಳು ಪೋಷಕರ ನಂಬಿಕೆಗೆ ದ್ರೋಹ ಮಾಡದೆ ಅಭಿವೃದ್ಧಿ ಸಾಧಿಸಬೇಕು ಎಂದರು.

ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರನ್ನು ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು ಅಭಿನಂದಿಸಿದರು. ಎಂ.ಸ್ವರೂಪ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಸಿ.ಅಪೂರ್ವ ಚಂದ್ರ. ಜಿ. ಎಸ್.ಶಿವರಾಮು. ಮಲ್ಲಿಕಾರ್ಜುನ್. ಪ್ರಾಂಶುಪಾಲ ಜಿ.ಎಸ್. ಶಂಕರೇಗೌಡ. ಉಪ ಪ್ರಾಂಶುಪಾಲ ಪ್ರಕಾಶ್, ಜಿ.ಸುರೇಂದ್ರ, ಡಾ.ಕಿರಣ್, ಪ್ರಕಾಶ್ ಮತ್ತಿತರರು ಇದ್ದರು.