ಯಳಂದೂರು ತಾಲೂಕಿನ ಯರಿಯೂರಿನಲ್ಲಿ ತಲೆಎತ್ತಿರುವ ಕಮಾನು ವಿವಾದ । ಬಹುಜನ ಸಮಾಜ ಪಕ್ಷದ ಎಂ. ಕೃಷ್ಣಮೂರ್ತಿ ಆರೋಪ
---ಕನ್ನಡಪ್ರಭ ವಾರ್ತೆ ಚಾಮರಾಜನಗರಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ರವರ ಹೆಬ್ಬಾಗಿಲು ಅಳವಡಿಕೆ ಸಂದರ್ಭದಲ್ಲಿ ಉಂಟಾದ ವಿವಾದಕ್ಕೆ ಯರಿಯೂರು ಗ್ರಾಪಂ ಪಿಡಿಒ ಶಿವಕುಮಾರ್ ಹಾಗೂ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಕಾರಣ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯರಿಯೂರು ಹೆಬ್ಬಾಗಿಲಿನಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ಕಮಾನು ಅಳವಡಿಸಲು ಯರಿಯೂರು ಗ್ರಾಪಂಗೆ ಏ.೧೬ರಂದು ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘವು ಮನವಿ ನೀಡಿ ಅನುಮತಿ ಪಡೆದು ಏ.೧೯ರಂದು ಕಮಾನು ಅಳವಡಿಕೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಏಕಾಏಕಿ ಪೊಲೀಸರು ಆಗಮಿಸಿದ್ದು, ನೀವು ಕೋರಿದ್ದ ಅನುಮತಿ ರದ್ದಾಗಿದೆ ಎಂದು ತಿಳಿಸಿ ಕಮಾನು ಅಳವಡಿಕೆ ಮಾಡುವುದನ್ನು ತಡೆದಿದ್ದಾರೆ. ಇದರ ಹಿಂದೆ ಮುಖ್ಯಮಂತ್ರಿ ಕಚೇರಿಯ ದುರುಪಯೋಗವಾಗಿದೆ ಎಂದು ಅರೋಪಿಸಿದರು.ಕೆಲಕಾಲ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ಕಮಾನು ಅಳವಡಿಕೆ ಕಾರ್ಯ ನಡೆದಿದ್ದು, ಈ ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಿಡಿಒ ಶಿವಕುಮಾರ್ ಸ್ಥಳ ಪರಿಶೀಲನೆ ಮಾಡಿ ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದುಕೊಂಡು ಪರಿಶೀಲಿಸಿ ಎಲ್ಲಾ ದಾಖಲಾತಿಗಳ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿಯನ್ನು ಹೊರತುಪಡಿಸಿ ಅಂಬೇಡ್ಕರ್ ಭಾವಚಿತ್ರವುಳ್ಳ ಕಮಾನು ನಿರ್ಮಿಸಲು ಅನುಮತಿಯನ್ನು ಏ.೧೪ರಂದು ನೀಡಿದ್ದರು.ಅಂಬೇರ್ ಅವರ ಕಮಾನು ಅಳವಡಿಕೆಗೆ ಮೊದಲಿಗೆ ಅನುಮತಿ ನೀಡಿದ್ದ ಗ್ರಾಪಂ ಪಿಡಿಒ ಶಿವಕುಮಾರ್ ಬಳಿಕ ಏ.೧೮ರಂದು ಆ ಆದೇಶವನ್ನು ರದ್ದು ಮಾಡಿರುವ ವಿಚಾರವನ್ನು ಅಂಬೇಡ್ಕರ್ ಯುವಕರ ಸಂಘಕ್ಕಾಗಲಿ, ಗ್ರಾಮಸ್ಥರಿಗಾಗಲೀ ಮಾಹಿತಿ ನೀಡದೇ ಈ ವಿವಾದಕ್ಕೆ ಕಾರಣರಾಗಿದ್ದಾರೆ. ಅಲ್ಲದೇ, ಏಕಾಏಕಿ ಅನುಮತಿ ರದ್ದು ಆಗಿರುವ ಪತ್ರ ಹಿಡಿದು ಬಂದ ಪೊಲೀಸರು ಸಿಎಂ ಕಚೇರಿಯಿಂದ ಬಂದ ಒತ್ತಡಕ್ಕೆ ಮಣಿದು ಕಮಾನು ಅಳವಡಿಕೆ ಮಾಡುವುದನ್ನು ತಡೆಯಲು ಮುಂದಾಗಿದ್ದು ಖಂಡನೀಯ ಎಂದರು.ಈ ಸಂಬಂಧ ಜಿಲ್ಲಾಡಳಿತ, ಜಿಪಂ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಧಾನ ಸಭೆ ನಡೆಸಿ ಈ ಘಟನೆಗೆ ಕಾರಣರಾದ ಪಿಡಿಒ ಹಾಗೂ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲದೇ, ಈ ಘಟನೆ ಸಂಬಂಧ ಯಾವುದಾದರೂ ಪ್ರಕರಣಗಳು ದಾಖಲಾದರೆ ಅದರ ವಿರುದ್ಧ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಸಂಸದರು ಹಾಗೂ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ವಿಶೇಷ ಗಮನಹರಿಸಿದೇ ನಿರ್ಲಕ್ಷ್ಯವಹಿಸಿದ್ದಾರೆ. ಗ್ರಾಮದಲ್ಲಿ ಎಲ್ಲರೂ ಸೌಹಾರ್ಧತೆಯಿಂದ ಇದ್ದು, ಘಟನೆಗೆ ಪಿಡಿಒ ಹಾಗೂ ಪೊಲೀಸರು ಮತ್ತು ಮುಖ್ಯಮಂತ್ರಿ ಕಚೇರಿಯ ಪ್ರಭಾಕರ್ ಕಾರಣರಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್. ನಾಗಯ್ಯ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾಧ್ಯಕ್ಷ ಬ.ಮ. ಕೃಷ್ಣಮೂರ್ತಿ, ಜಿಲ್ಲಾ ಉಸ್ತುವಾರಿ ಪುಟ್ಟಸ್ವಾಮಿ, ಮುಖಂಡರಾದ ರವಿಮೌರ್ಯ, ಚಂದ್ರಕಾಂತ್, ಮಲ್ಲಿಕ್ ಬಹುಜನ್ ಇದ್ದರು.---೨೨ಸಿಎಚ್ಎನ್೧ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿದರು.--------------