ಜನರಿಗೆ ಹತ್ತಿರವಿರುವ ಸರ್ಕಾರದ ಯಾವುದಾದರೂ ಸ್ಥಳೀಯ ಸಂಸ್ಥೆ ಇದ್ದರೆ ಅದು ಗ್ರಾಮಪಂಚಾಯಿತಿಗಳು ಮಾತ್ರವೇ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಜನರಿಗೆ ಹತ್ತಿರವಿರುವ ಸರ್ಕಾರದ ಯಾವುದಾದರೂ ಸ್ಥಳೀಯ ಸಂಸ್ಥೆ ಇದ್ದರೆ ಅದು ಗ್ರಾಮಪಂಚಾಯಿತಿಗಳು ಮಾತ್ರವೇ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ತಾಲೂಕಿನ ದುಗಡೀಹಳ್ಳಿ ಗ್ರಾಮಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, ೩೦ಲಕ್ಷ ವೆಚ್ಚದಲ್ಲಿ ನೂತನವಾಗಿ ಕಟ್ಟಡವನ್ನು ನಿರ್ಮಿಸುವ ಮೂಲಕ ಜನರಿಗೆ ಉತ್ತಮವಾದ ಸೇವೆ ಒದಗಿಸಲು ನಿರ್ಮಿಸಲಾಗಿದೆ. ನಾಗರಿಕರೊಂದಿಗೆ ಸೌಜನ್ಯದೊಂದಿಗೆ ಸ್ಪಂದಿಸುವ ಮೂಲಕ ಅವರ ಕೆಲಸಗಳನ್ನು ಮಾಡಿಕೊಡಿ. ಆಶ್ರಯ ಯೋಜನೆಯಡಿ ಕೇವಲ ೧.೫೦ಲಕ್ಷ ಅನುದಾನ ನೀಡುತ್ತಿದ್ದು ಅದು ಮನೆ ನಿರ್ಮಿಸಲು ಸಾದ್ಯವಾಗುವುದಿಲ್ಲ. ಅದ್ದರಿಂದ ಕನಿಷ್ಠ ೩ ರಿಂದ ೪ ಲಕ್ಷಕ್ಕೆ ಹೆಚ್ಚಿಸಬೇಕೆಂದು ಈಗಾಗಲೇ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಅದರಂತೆ ಗಣಿಬಾಧಿತ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ೧೩ಪಂಚಾಯತಿ ವ್ಯಾಪ್ತಿಯಲ್ಲಿ ೭ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ೧೫೦೦ಮನೆಗಳಿಗೆ ಮಂಜೂರಾತಿ ಸಿಕ್ಕಿದ್ದು ಇನ್ನು ೫ಸಾವಿರ ಮನೆಗಳ ಅನುಮೋದನೆಗೆ ಸಲ್ಲಿಸಲಾಗಿದೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎನ್‌ಆರ್‌ಐಜಿ ಕಾಮಗಾರಿಗಳಡಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ನೂತನ ಯೋಜನೆ ಅನುಷ್ಠಾನಗೊಂಡರೆ ಇನ್ನು ಹೆಚ್ಚು ಅನುಕೂಲವಾಗಲಿದೆ ಎಂಬ ಭರವಸೆ ಇದೆ ಎಂದರು.

ತಹಸೀಲ್ದಾರ್ ಮಮತಾ ಎಂ. ಮಾತನಾಡಿ ಉತ್ತಮ ಕಟ್ಟಡ ನಿರ್ಮಾಣವಾಗಿದ್ದು ಅದರಂತೆ ಉತ್ತಮ ಕೆಲಸಗಳು ನಡೆಯಬೇಕಿದೆ. ಇನ್ನೇನು ಕೇಲವು ದಿನಗಳಲ್ಲಿ ಸದಸ್ಯರುಗಳ ಅಧಿಕಾರಾವಧಿ ಮುಗಿಯಲಿದ್ದು ಇಷ್ಟು ದಿನಗಳಿಂದ ಜವಾಬ್ದಾರಿಯಿಂದ ನೀವು ಕೆಲಸ ಮಾಡಿದಂತೆ ಇನ್ನು ಮುಂದೆ ಸೇವೆ ಎಂದು ಜನರ ಕೆಲಸವನ್ನು ಮಾಡಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಜನರ ಸೇವೆ ಮಾಡಿ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್.ಶಶಿದರ್ ಮಾತನಾಡಿ, ದುಗಡಿಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೊಡಲಾಗರ ರಸ್ತೆ ಸೇರಿದಂತೆ ಜನರಿಗೆ ನಿವೇಶನಗಳ ಸಮಸ್ಯೆ, ಮನೆಗಳ ಸಮಸ್ಯೆಗಳಿವೆ ಅದನ್ನು ಬಗೆಹರಿಸಬೇಕಿದೆ. ಶಾಸಕರು ಅವರ ಜನಪ್ರಿಯ ಕಾರ್ಯಕ್ರಮ ಮನೆ ಬಾಗಿಲಿಗೆ ಮನೆಮಗ ಕಾರ್ಯಕ್ರಮವನ್ನು ಈ ಪಂಚಾಯಿತಿಯಲ್ಲಿ ನಡೆಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಗ್ರಾಪಂ ಅಧ್ಯಕ್ಷೆ ಮಂಜುಳಾ ಮಾತನಾಡಿ ಅನೇಕ ವರ್ಷಗಳ ಬೇಡಿಕೆಯಾಗಿದ್ದ ನೂತನ ಕಟ್ಟಡವನ್ನು ನಿರ್ಮಿಸುವ ಮೂಲಕ ಈ ಪಂಚಾಯಿತಿಯ ಜನರಿಗೆ ಅನುಕೂಲವಾಗಲಿದೆ ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಇಒ ದೊಡ್ಡಸಿದ್ದಯ್ಯ, ಗ್ಯಾರಂಟಿಯೋಜನೆಗಳ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸೇರಿದಂತೆ ಸದಸ್ಯರುಗಳಾದ ಮೈತ್ರಿ, ಶರತ್, ಧನಂಜಯ್, ರಾಜಶೇಖರ್, ಲಲಿತಮ್ಮ, ಪ್ರಿಯಾಂಕ , ರಂಜಿತ್, ಗೋಪಾಲಯ್ಯ, ಶ್ರೀನಿವಾಸ್, ಜಗದೀಶ್, ರಮೇಶ್, ಸಂಜೀವ್, ರಾಜೇಂದ್ರ, ದೀಪು, ಶೋಭ ಸೇರಿದಂತೆ ಪಿಡಿಒ ಭೈರಪ್ಪ ಹಾಗೂ ಪಂಚಾಯಿತಿ ಸಿಬ್ಬಂದಿ ಇದ್ದರು.