ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಮೊಳಕಾಲ್ಮೂರು: ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಸೋಮವಾರ ಸಂಜೆ ದೇವಸ್ಥಾನದಲ್ಲಿ ದೀಪಾರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸುವ ಮೂಲಕ ರಥವನ್ನು ತಳಿರು ತೋರಣಗಳಿಂದ ಅಲಂಕರಿಸಲಾಯಿತು. ನಾನಾ ತರದ ಹೂವಿನ ಹಾರಗಳಿಂದ ಬಣ್ಣ ಬಣ್ಣದ ಬಾವುಟಗಳನ್ನು ಕಟ್ಟಿ ಸಿಂಗರಿಸಿದ್ದ ರಥಕ್ಕೆಗೌಡರ ಮನೆಯಿಂದ ತರುವ ಬಲಿ ಅನ್ನ ಅರ್ಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನದ ಆವರಣದಿಂದ ತೇರು ಬೀದಿಯ ಮೂಲಕ ಪಾದಗಟ್ಟಿಯವರೆಗೆ ರಥವನ್ನು ಎಳೆದೊಯ್ದು ಮೂಲ ಸ್ಥಾನಕ್ಕೆ ಕರೆತರಲಾಯಿತು.

ರಥೋತ್ಸವದ ಉದ್ದಕ್ಕೂ ಭಕ್ತರು ಉರುಳು ಸೇವೆ ಮಾಡಿ ಭಕ್ತಿ ಸಮರ್ಪಿಸಿದರು. ಅಲ್ಲದೆ ಬಾಳೆ ಹಣ್ಣು ಚೂರು ಬೆಲ್ಲ ಎರಚಿದರು. ಬುಧವಾರ ಪಲ್ಲಕ್ಕಿ ಉತ್ಸವದೊಂದಿಗೆ ದೇವರನ್ನು ಗುಡಿ ತುಂಬಿಸಿ ಓಕುಳಿಯ ನಂತರ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.ರಥೋತ್ಸವದಲ್ಲಿ ದ್ರಾಕ್ಷ ರಸ ಹಾಗೂ ವೈನ್ ಬೋರ್ಡ್ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಜಯಣ್ಣ, ನಿವೃತ್ತ ತಹಸೀಲ್ದಾರ್ ರಘುಮೂರ್ತಿ, ಮುಖಂಡರಾದ ಶಿವಾನಂದಪ್ಪ, ನಾಗನಗೌಡ ಭಾಗಿಯಾಗಿದ್ದರು.