ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಬೈಲ ಬಸವೇಶ್ವರ ಸ್ವಾಮಿ ಮಹೋತ್ಸವವನ್ನು ಭಕ್ತಿಭಾವ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಅದ್ಧೂರಿಯಾಗಿ ನಡೆಸಲಾಯಿತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಾಮಿಯ ಆಶೀರ್ವಾದ ಪಡೆದರು.ಪ್ರತಿವರ್ಷ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಸಂಘಟಿತರಾಗಿ ಆಚರಿಸುವ ಈ ಮಹೋತ್ಸವವು ವಿಶೇಷ ಮಹತ್ವ ಹೊಂದಿದೆ. ಬೆಳಗ್ಗಿನಿಂದಲೇ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಸವಣ್ಣನ ಬೃಹತ್ ಮೂರ್ತಿಗೆ ವಿವಿಧ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಬೆಳ್ಳಿ ಮುಖವಾಡದಿಂದ ಸಿಂಗರಿಸಿದ ಸ್ವಾಮಿಯ ದರ್ಶನ ಭಕ್ತರ ಮನ ಸೆಳೆಯಿತು. ಮಹೋತ್ಸವದ ಅಂಗವಾಗಿ ಗ್ರಾಮಸ್ಥರು ಒಗ್ಗೂಡಿ ಸಾಂಪ್ರದಾಯಿಕ ಕಟ್ಟಿಗೆ ಒಲೆಯಲ್ಲಿ ತಯಾರಿಸಿದ ರಾಗಿ ಮುದ್ದೆ, ವಿವಿಧ ಕಾಳುಬೇಳೆಗಳ ಸಾಂಬಾರ್ ಹಾಗೂ ದೇಸಿ ತುಪ್ಪದೊಂದಿಗೆ ಅನ್ನದಾಸೋಹವನ್ನು ಆಯೋಜಿಸಿದ್ದರು. “ಅನ್ನ ಬ್ರಹ್ಮ” ಎಂಬ ಭಾವನೆಯೊಂದಿಗೆ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದಾಸೋಹದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.ಪ್ರಕೃತಿ ಮಡಿಲಲ್ಲಿ ನೆಲೆಸಿರುವ ಶ್ರೀ ಬೈಲ ಬಸವೇಶ್ವರ ಸ್ವಾಮಿಯೊಂದಿಗೆ ಜಾಜೂರು ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಹೊನ್ನಾಲದಮ್ಮ, ಶ್ರೀ ದೂತರಾಯ ಹಾಗೂ ಶ್ರೀ ಮಲ್ಲಿಗೆಮ್ಮ ದೇವರುಗಳಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಸಮಸ್ತ ಭಕ್ತರ ಹಾಗೂ ಸಮಾಜದ ಒಳಿತಿಗಾಗಿ ಲೋಕಕಲ್ಯಾಣಾರ್ಥ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿ ಭಕ್ತಿಭಾವದಿಂದ ಸಂಭ್ರಮಿಸಿದರು.