ಸಾರಾಂಶ
ಔರಾದ್ ತಹಸೀಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಅಧಿಕಾರಿಗಳ ಹಾಗೂ ಕನ್ನಡಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಔರಾದ್
ಜ.20ರಂದು ಪಟ್ಟಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತಿಸಿ ಸಮಾರಂಭ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಹೇಳಿದರು.ತಹಸೀಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಅಧಿಕಾರಿಗಳ ಹಾಗೂ ಕನ್ನಡಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಂದು ಕೌಠಾ ಗ್ರಾಮದಲ್ಲಿ ರಥಯಾತ್ರೆಗೆ ಬರಮಾಡಿಕೊಳ್ಳಲಾಗುವುದು. ಔರಾದ್ ರಸ್ತೆ ಮಧ್ಯದಲ್ಲಿರುವ ಲಾಧಾ, ಸಂತಪೂರ, ಎಕಲಾರ ಗ್ರಾಪಂಗಳಿಂದ ಜ್ಯೋತಿ ರಥಯಾತ್ರೆಗೆ ಸ್ವಾಗತಿಸುವಂತೆ ತಾಪಂ ಇಒಗೆ ತಿಳಿಸಲಾಗಿ, ಔರಾದ್ ಪಟ್ಟಣದಲ್ಲಿ ಭವ್ಯವಾದ ಮೆರವಣಿಗೆ ನಡೆಸಲು ನಿರ್ಧರಿಸಲಾಯಿತು.
ಮೆರವಣಿಗೆಯಲ್ಲಿ ಆಕರ್ಷಣೀಯವಾಗಿ ಸಾವಿರ ಮೀ. ಉದ್ದದ ಕನ್ನಡ ಧ್ವಜ, ಎರಡು ಮಹಿಳಾ ಕಲಾವಿದರ ತಂಡಗಳು ಭಾಗವಹಿಸಲಿದೆ. ಸ್ಥಳಿಯ ಶಾಲಾ ಕಾಲೇಜು ಮಕ್ಕಳು ಪಾಲ್ಗೊಳ್ಳಲು ಬಿಇಒಗೆ ಸೂಚಿಸಲಾಯಿತು. ಕನ್ನಡಾಂಬೆ ವೃತ್ತದಿಂದ ಅಮರೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗುವುದು. ನಾಡು ನುಡಿ ಕುರಿತು ಉಪನ್ಯಾಸಕ್ಕೆ ಶಿಕ್ಷಕ ಶಿವಲಿಂಗ ಹೇಡೆಯವರ ಹೆಸರು ಅಂತಿಮಗೊಳಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಾಲಿವಾನ ಉದಗಿರೆ, ದಾಸ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ ಅಮರವಾಡಿ, ಜಾನಪದ ಪರಿಷತ್ ಅಧ್ಯಕ್ಷ ಸಂಜೀವಕುಮಾರ್ ಜುಮ್ಮಾ, ಕರವೇ ಅಧ್ಯಕ್ಷ ಅನೀಲ ದೇವಕತೆ, ರತ್ನದೀಪ ಕಸ್ತೂರೆ, ಸುನೀಲ ಮಿತ್ರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.