ಸಾರಾಂಶ
ಚನ್ನಪಟ್ಟಣ: ನಟ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಲನಚಿತ್ರ ಪ್ರದರ್ಶನಗೊಳ್ಳುತ್ತಿರುವ ನಗರದ ಶಿವಾನಂದ ಚಿತ್ರಮಂದಿರಕ್ಕೆ ಚಿತ್ರತಂಡ ಭಾನುವಾರ ಭೇಟಿ ನೀಡಿತು. ಚಿತ್ರದ ನಾಯಕ ಚಿಕ್ಕಣ್ಣ, ನಾಯಕಿ ಮಲೈಕಾ ವಸುಪಾಲ್ ಮತ್ತು ತಂಡಕ್ಕೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಅಭಿಮಾನಿಗಳು ಚಿಕ್ಕಣ್ಣ ಪರ ಜಯಘೋಷ ಮೊಳಗಿಸಿ ಹಷೋದ್ಘಾರ ಮಾಡಿದರು. ಈ ವೇಳೆ ಪಟಾಕಿ ಸಿಡಿಸಿ, ತಮಟೆ ಹೊಡೆದು ಚಿತ್ರತಂಡವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ನಟ ಚಿಕ್ಕಣ್ಣ, ಜನರ ಆಶೀರ್ವಾದ ಸಿಗುವ ನಿರೀಕ್ಷೆ ಇತ್ತು, ಆದರೆ ನಮ್ಮ ನಿರೀಕ್ಷೆಗಿಂತ ಹೆಚ್ಚಿನ ಸ್ಪಂದನೆ ಸಿಗುತ್ತಿದೆ. ಚಿತ್ರ ಪ್ರರ್ದಶನ ಕಾಣುತ್ತಿರುವ ಚನ್ನಪಟ್ಟಣದ ಚಿತ್ರಮಂದಿರಕ್ಕೂ ಭೇಟಿ ನೀಡಿದ್ದು,ಅಲ್ಲೂ ಸಹ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈಗಾಗಲೇ ಚಿತ್ರ ವೀಕ್ಷಿಸಿರುವ ಪ್ರೇಕ್ಷರಿಗೆ ಧನ್ಯವಾದ, ಚಿತ್ರ ವೀಕ್ಷಿಸದವರು ಕುಟುಂಬ ಸಮೇತರಾಗಿ ಬಂದು ವೀಕ್ಷಿಸಿ. ಇಷ್ಟು ದೊಡ್ಡಮಟ್ಟದಲ್ಲಿ ಜನ ನಮ್ಮ ಚಿತ್ರವನ್ನು ಬೆಂಬಲಿಸುತ್ತಾರೆ ಅಂದುಕೊಂಡಿರಲಿಲ್ಲ. ಜನರ ಪ್ರೀತಿಗೆ ನಾವು ಮರಳಿ ಏನನ್ನೂ ನೀಡಲು ಆಗುವುದಿಲ್ಲ. ಒಂದು ಉತ್ತಮ ಚಿತ್ರ ನೀಡಿ ಅವರನ್ನು ನಗಿಸಬಹುದು ಅಷ್ಟೇ ಎಂದು ಭಾವುಕರಾದರು. ಉಮಾಪತಿ ಅಭಿಮಾನಿ ಬಳಗದ ಮೋಹನ್ ಗೌಡ ಇತರರು ಇದ್ದರು.