ರೇಣುಕಾಚಾರ್ಯರ ಜಯಂತಿಗೆ ಅನುದಾನ ನೀಡಿ: ಶರಣಯ್ಯ

| Published : Mar 21 2024, 01:09 AM IST

ಸಾರಾಂಶ

ರೇಣುಕಾಚಾರ್ಯರ ಜಯಂತಿಗೆ ಅನುದಾನ ನೀಡುವಂತೆ ಅಥಣಿ ತಹಸೀಲ್ದಾರ್‌ ವಾಣಿ.ಯು ಮೂಲಕ ರಾಜ್ಯ ಸರ್ಕಾರಕ್ಕೆ ಜಂಗಮ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಮಾ.23 ರಂದು ರಾಜ್ಯದಾದ್ಯಂತ ಸರ್ಕಾರದ ವತಿಯಿಂದ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಅಥಣಿ ತಾಲೂಕು ಜಂಗಮ ಸಮಾಜ ವತಿಯಿಂದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ತಾಲೂಕು ಮಟ್ಟದಲ್ಲಿ ಜರುಗುವ ಈ ಜಯಂತಿ ಉತ್ಸವಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂದು ತಾಲೂಕು ಜಂಗಮ ಸಮಾಜದ ಮುಖಂಡ ಶರಣಯ್ಯ ವಸ್ತ್ರದ ಒತ್ತಾಯಿಸಿದರು.

ತಾಲೂಕ ತಹಸೀಲ್ದಾರ್‌ ವಾಣಿ.ಯು ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದ್ಗುರು ರೇಣುಕಾಚಾರ್ಯ ಅವರು ಸಿದ್ಧಾಂತ ಶಿಖಾಮಣಿಯಂತಹ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ ಬದುಕನ್ನು ಬೋಧಿಸಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಕೋಟ್ಯಾಂತರ ಭಕ್ತ ಸಮೂಹ ಹೊಂದಿದ್ದಾರೆ. ಸೌಹಾರ್ದ, ಸಹಬಾಳ್ವೆಯ ಮಹತ್ವವನ್ನು ನಾಡಿನ ಜನತೆಗೆ ಸಾರಿದವರು ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಚರಣೆಗೆ ಆದೇಶ ಮಾಡಿರುವುದು ಸ್ವಾಗತರ್ಹ. ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಇತಿಮಿತಿಯಲ್ಲಿ ತಾಲೂಕು ಆಡಳಿತದಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸಿ.ಎ.ಇಟ್ನಾಳಮಠ, ಜಂಗಮ ಸಮಾಜದ ಮುಖಂಡರಾದ ಜಗದೀಶ ಹಿರೇಮಠ, ಸಂಜೀವ ತೆಲಸಂಗ, ಶಿವು ತೆಲಸಂಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.