ರಾಂ ಅಜೆಕಾರು ಕಾರ್ಕಳ:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಂದಾಯ ಇಲಾಖೆಯ ಹಕ್ಕುಪತ್ರ ದರ್ಖಾಸ್ತು ಮಂಜೂರಾತಿ ಹಾಗೂ ಅತ್ಯುತ್ತಮ ಪೋಡಿ (ಪ್ಲಾಟಿಂಗ್) ಯೋಜನೆ ಅನುಷ್ಠಾನದಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ ಕಾರ್ಕಳ ಆರನೇ ಸ್ಥಾನ ಪಡೆದಿದೆ.ಕಾರ್ಕಳ ತಾಲೂಕಿನಲ್ಲಿ ಒಟ್ಟು 2,251 ಸರ್ವೆ ನಂಬರ್ಗಳ ವ್ಯಾಪ್ತಿಯಲ್ಲಿ 7,578 ಖಾತೆದಾರರಿಗೆ ಯಾವುದೇ ಪ್ರತ್ಯೇಕ ದಾಖಲೆಗಳನ್ನು ಪಡೆದುಕೊಳ್ಳದೆ, ತಂತ್ರಾಂಶದ ಮೂಲಕ ಅನುಬಂಧ-1 ನೀಡುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಹಕ್ಕುಪತ್ರ ಮಂಜೂರಾತಿ ಪ್ರಕ್ರಿಯೆಯನ್ನು ವೇಗವಾಗಿ, ಪಾರದರ್ಶಕವಾಗಿ ನಡೆಸಿದ್ದರಿಂದ ಯಶಸ್ಸು ದೊರೆತಿದೆ.
ಡಿಜಿಟಲ್ ವ್ಯವಸ್ಥೆಯ ಪರಿಣಾಮಕಾರಿ ಬಳಕೆ, ಅಧಿಕಾರಿಗಳ ಸಮನ್ವಯ ಹಾಗೂ ಸಾರ್ವಜನಿಕರಿಗೆ ಶೀಘ್ರ ಸೇವೆ ಒದಗಿಸುವ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಆಯುಕ್ತರು ಕಾರ್ಕಳ ತಾಲೂಕು ತಹಸೀಲ್ದಾರ್ ಪ್ರದೀಪ್ ಆರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ತಾಲೂಕು ಕಂದಾಯ ಇಲಾಖೆಯ ಸಿಬ್ಬಂದಿಗೆ ಪ್ರಶಸ್ತಿ ಮತ್ತು ಅಭಿನಂದನಾ ಪತ್ರ ನೀಡಲಾಗಿದೆ.ಕಡಬ ಮೊದಲ ಸ್ಥಾನ, ಬೆಳ್ತಂಗಡಿ ದ್ವಿತೀಯ: ರಾಜ್ಯ ಮಟ್ಟದ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಕಡಬ ತಹಸೀಲ್ದಾರ್ ಪ್ರಭಾಕರ್ ಕಾಜುರೇ ಪಡೆದುಕೊಂಡಿದ್ದಾರೆ. ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೆಕರ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಬೆಳ್ತಂಗಡಿ ದ್ವಿತೀಯ, ಪುತ್ತೂರು ತೃತೀಯ ಸ್ಥಾನ ಪಡೆದರೆ, ಬಂಟ್ವಾಳ ಐದನೇ ಸ್ಥಾನದಲ್ಲಿದ್ದು, ಕಾರ್ಕಳ ಆರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಶಿರಾ 10ನೇ, ಸುಳ್ಯ 11ನೇ, ಮೂಡುಬಿದರೆ 13ನೇ ಹಾಗೂ ಉಡುಪಿ 14ನೇ ಸ್ಥಾನ ಪಡೆದಿವೆ. ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಸಾಧನೆ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಜಿಲ್ಲೆಯ ಆಡಳಿತ ವ್ಯವಸ್ಥೆಯ ಸಮಗ್ರ ಕಾರ್ಯಕ್ಷಮತೆ ತೋರಿಸುತ್ತದೆ.
*ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿರುವುದು ಕುಂದಾಪುರ ತಾಲೂಕು ಕಂದಾಯ ಇಲಾಖೆಯ ಸಮೂಹ ಪ್ರಯತ್ನದ ಫಲವಾಗಿದೆ. ಹಕ್ಕುಪತ್ರ ಮಂಜೂರಾತಿ ಮತ್ತು ಪೋಡಿ ಕಾರ್ಯವನ್ನು ಪಾರದರ್ಶಕ ಹಾಗೂ ವೇಗವಾಗಿ ಪೂರ್ಣಗೊಳಿಸಲು ಡಿಜಿಟಲ್ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಬಳಸಿದ್ದೇವೆ.
-ಪ್ರದೀಪ್ ಕುರ್ಡೇಕರ್ ಕುಂದಾಪುರ ತಹಸೀಲ್ದಾರ್
*236 ತಾಲೂಕುಗಳ ಪೈಕಿ ಕಾರ್ಕಳ ಆರನೇ ಸ್ಥಾನ ಪಡೆದಿರುವುದು ನಮ್ಮ ತಂಡದ ನಿಷ್ಠಾವಂತ ಕಾರ್ಯದ ಪ್ರತಿಫಲವಾಗಿದೆ. 2,251 ಸರ್ವೆ ನಂಬರ್ಗಳ ವ್ಯಾಪ್ತಿಯಲ್ಲಿ 7,578 ಖಾತೆದಾರರಿಗೆ ಅನುಬಂಧ–1 ವಿತರಿಸುವ ಕಾರ್ಯವನ್ನು ತಂತ್ರಾಂಶದ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ.-ಪ್ರದೀಪ್ ಆರ್ ಕಾರ್ಕಳ ತಹಸೀಲ್ದಾರ್