ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಕಾಂತರ ಚಿತ್ರದಿಂದಾಗಿ ಧಾರ್ಮಿಕ ಕ್ಷೇತ್ರಗಳಿಗೆ ಯುವಕರು ಹೆಚ್ಚು ನಂಬಿಕೆ ಇಡುವಂತಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಕಡೆ ಹೆಚ್ಚು ಒತ್ತು ನೀಡುವುದರೊಂದಿಗೆ ಹಂತ ಹಂತವಾಗಿ ಆಭಿವೃದ್ದಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವುದಾಗಿ ಶಾಸಕ ಅರಣ್ಯಕೈಗಾರಿಕಾಭಿವೃದ್ದಿ ನಿಗಮದ ಆಧ್ಯಕ್ಷ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.

ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ದ ಶ್ರೀ ಗುಳುಗುಳಿಶಂಕರದ ಶ್ರೀಶಂಕರೇಶ್ವರ ದೇವಸ್ಥಾನದ 11ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಧರ್ಮಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಯಾಗಿ ಭಾಗವಹಿಸಿ ಮಾತನಾಡಿ, ದೇವಸ್ಥಾನ ಸೇವಾ ಸಮಿತಿಯವರು ಮನವಿ ಪತ್ರದಲ್ಲಿ ಕೋರಿದಂತೆ ತುರ್ತಾಗಿ ಚರಂಡಿ ಮತ್ತು ಸಾರ್ವಜನಿಕರ ಶೌಚಾಲಯ ಸೇರಿದಂತೆ ಸಂಪರ್ಕ ರಸ್ತೆಯ ಅಭಿವೃದ್ದಿ ಮಾಡುವ ಭರವಸೆ ನೀಡಿ ಉಳಿದಂತೆ ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಕೆಗೆ ಹೆಚ್ಚು ಒತ್ತಡವಿದೆ ಅದರೆ ಈಗ ಬೇಸಿಗೆಯಾಗಿರುವ ಕಾರಣ ಟಿ.ಸಿಗಳು ಸಕಾಲದಲ್ಲಿ ಸಿಗುತ್ತಿಲ್ಲದ ಕಾರಣ ತಾವುಗಳು ತಾಳ್ಮವಹಿಸಬೇಕು ಎಂದು ಮನವರಿಕೆ ಮಾಡಿ ಮುಂದಿನ ದಿನಗಳಲ್ಲಿ ಟಿ.ಸಿಯನ್ನು ಸಹ ಹಾಕಿಸುವುದಾಗಿ ಭರವಸೆ ನೀಡಿ ಧರ್ಮ ಧಾರ್ಮಿಕ ಅಚರಣೆಗಳಿಂದ ಯುವಕ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆಂದು ಹೇಳಿ ಗ್ರಾಮದಲ್ಲಿ ಗ್ರಾಮ ದೇವರನ್ನು ಶ್ರದ್ದಾಭಕ್ತಿಯಿಂದ ಆಚರಿಸಿ ಎಂದರು.

ದಿವ್ಯಸಾನ್ನಿಧ್ಯವನ್ನು ಹಾರ್ನಹಳ್ಳಿ ರಾಮಲಿಂಗೇಶ್ವರಮಠದ ಷ.ಬ್ರ.ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಿ ಅಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನ ಸೇವಾ ಸಮಿತಿಯ ಆಧ್ಯಕ್ಷ ವಾಸುದೇವ್‍ ಶೇಟ್ ವಹಿಸಿದ್ದರು.

ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಜೆ.ಚಂದ್ರುಮೌಳಿಗೌಡರು,ಬೆಂಗಳೂರಿನ ಸೀತಾ ನಾಗರಾಜಕುಮಾರ್, ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಅವಡೆ ಶಿವಪ್ಪ ಮುಖ್ಯ ಅತಿಥಿಗಳಾಗಿ ಭಾಗಹಿಸಿದ್ದರು.


ಶಿವಮೊಗ್ಗ ಅಂದಾಲ್ಸ್ ರಾಘಭಟ್ರು ಪುರೋಹಿತ ತಂಡದವರ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಗುಳುಗುಳಿಶಂಕರೇಶ್ವರ ಸ್ವಾಮಿಗೆ ಕುಂಭಾಭಿಷೇಕ, ಕಲಾಹೋಮ, ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ. ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.

ಯಶೋಧಮ್ಮ ಪ್ರಾರ್ಥಿಸಿದರು.ನಾಗರಾಜ ಸ್ವಾಗತಿಸಿದರು. ಅವಡೆ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.