ಗ್ರೀಕ್ ನಾಟಕದಲ್ಲಿ ಧರ್ಮ, ನ್ಯಾಯ, ಮಾನವ ವ್ಯಕ್ತಿತ್ವ ಮತ್ತು ನೈತಿಕ ಸಂಘರ್ಷ ಆಳವಾಗಿ ಬಿಂಬಿಸಲಾಗಿದೆ. ಮಾನವೀಯ ಜೀವನದ ಮೌಲ್ಯಗಳು, ತತ್ವ ಚಿಂತನೆ ತಿಳಿಸುತ್ತವೆ.

ಧಾರವಾಡ:

ಗ್ರೀಕ್ ನಾಟಕಗಳು ಪ್ರಾಚೀನ ಸಂಸ್ಕೃತಿ, ತತ್ವಶಾಸ್ತ್ರ, ಮಾನವ ಶಾಸ್ತ್ರಗಳ ತಳಹದಿಯಾಗಿವೆ. ಗ್ರೀಕ್ ನಾಟಕಗಳು ಇಂದಿಗೂ ಪ್ರಸ್ತುತತೆ ಉಳಿಸಿಕೊಂಡಿವೆ ಎಂದು ಹಾಸನ ವಿವಿ ಕುಲಪತಿ ಪ್ರೊ. ತರೀಕೆರೆ ತಾರಾನಾಥ ಹೇಳಿದರು.

ಧಾರವಾಡ ಕಟ್ಟೆ ಕೆಎಲ್‌ಇ ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಗ್ರೀಕ್ ನಾಟಕದಲ್ಲಿ ಧರ್ಮ, ನ್ಯಾಯ, ಮಾನವ ವ್ಯಕ್ತಿತ್ವ ಮತ್ತು ನೈತಿಕ ಸಂಘರ್ಷ ಆಳವಾಗಿ ಬಿಂಬಿಸಲಾಗಿದೆ. ಮಾನವೀಯ ಜೀವನದ ಮೌಲ್ಯಗಳು, ತತ್ವ ಚಿಂತನೆ ತಿಳಿಸುತ್ತವೆ ಎಂದರು.

ಪ್ರಾಚಾರ್ಯ ಡಾ. ನೀಲಕ್ಕ ಪಾಟೀಲ ಮಾತನಾಡಿ, ಗ್ರೀಕ್ ನಾಟಕಗಳು ಸಂಗೀತದಿಂದ ಆರಂಭವಾಗಿ ಸಂಭಾಷಣೆ ಮೂಲಕ ಅಭಿವೃದ್ಧಿ ಹೊಂದಿದವು. ಅವು ಧಾರ್ಮಿಕ ಆಚರಣೆಗಳಿಂದ ಹುಟ್ಟಿಕೊಂಡು, ನಂತರ ಸಮಾಜದ ಜೀವನವನ್ನು ಪ್ರತಿಬಿಂಬಿಸುವ ಮಹತ್ವದ ಕಲಾರೂಪವಾಗಿ ಬೆಳೆದವು. ಗ್ರೀಕ್ ನಾಟಕಗಳು ಇಂದಿಗೂ ವಿಶ್ವದ ನಾಟಕ ಕಲೆಗೆ ಪ್ರೇರಣೆಯಾಗಿವೆ ಎಂದು ಹೇಳಿದರು.

ಲೇಖಕ ಡಾ. ವಿ.ಟಿ. ನಾಯಕ ಮಾತನಾಡಿ, ಗ್ರೀಕ್ ನಾಟಕಗಳು ಸಮಾಜ ಮತ್ತು ದೈವ ಹಿನ್ನೆಲೆ ಒಳಗೊಂಡಿದ್ದು, ಯುದ್ಧ, ಅರಾಜಕತೆ ಮತ್ತು ಮಾನವ ಜೀವನದ ಸಂಕಷ್ಟ ತೋರಿಸುತ್ತವೆ. ಸಾವಿರಾರು ವರ್ಷಗಳ ಹಿಂದೆಯೇ ರಚಿಸಲಾದ ಈ ಕೃತಿಗಳು ಇಂದಿಗೂ ಪ್ರಸ್ತುತ ಎಂದರು.

ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಕಟ ಪೂರ್ವ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮಾತನಾಡಿ, ಗ್ರೀಕ್ ನಾಟಕಗಳು ವಿಶ್ವ ಸಾಹಿತ್ಯದ ಅತ್ಯಂತ ಪ್ರಾಚೀನ ಮತ್ತು ಪ್ರಭಾವಶಾಲಿ ನಾಟಕ ಪರಂಪರೆಗಳಲ್ಲಿ ಒಂದಾಗಿದೆ. ಇವು ಪಾಶ್ಚಾತ್ಯ ನಾಟಕ ಕಲೆಯ ಮೂಲ. ಮಾನವ ಜೀವನದ ಸತ್ಯ, ನೈತಿಕ ಮೌಲ್ಯ, ಧಾರ್ಮಿಕ ನಂಬಿಕೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಆಳವಾಗಿ ಚಿತ್ರಿಸುತ್ತವೆ. ಗ್ರೀಕ್ ನಾಟಕಗಳ ಅಧ್ಯಯನ ವಿದ್ಯಾರ್ಥಿಗಳಿಗೆ ನಾಟಕ ಕಲೆಯ ಮೂಲಭೂತ ತತ್ವಗಳು ಹಾಗೂ ಅದರ ಇತಿಹಾಸ ತಿಳಿಯಲು ಸಹಕಾರಿಯಾಗುತ್ತದೆ. ಈ ಉಪನ್ಯಾಸ ಮಾಲಿಕೆ ಗ್ರೀಕ್ ನಾಟಕಗಳ ವಿವಿಧ ಆಯಾಮಗಳನ್ನು ಸಮಗ್ರವಾಗಿ ಪರಿಚಯಿಸುತ್ತದೆ ಎಂದು ತಿಳಿಸಿದರು.

ಹಂಪಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟಗೇರಿ ದಳವಾಯಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ ಪ್ರೊ. ಬಸವರಾಜ ಮಾತನಾಡಿದರು. ಡಾ ವಿಜಯಲಕ್ಷ್ಮೀ ದಾನರೆಡ್ಡಿ, ಪ್ರಶಾಂತ ಮಾಂಡ್ರೆ , ಡಾ. ಬಸಯ್ಯ ಸ್ವಾಮಿ ಇದ್ದರು.