ಕನ್ನಡಪ್ರಭ ವಾರ್ತೆ ಮಳವಳ್ಳಿ
ಆಧುನಿಕ ಒತ್ತಡದ ಜೀವನದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರು ಉತ್ತಮ ಗಾಳಿ, ಆರೋಗ್ಯಕ್ಕಾಗಿ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವ ಜೊತೆಗೆ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ಕುಮಾರ್ ಸಲಹೆ ನೀಡಿದರು.ಪಟ್ಟಣದ ಕನಕಪುರ ರಸ್ತೆಯ ಮಹದೇಶ್ವರ ಸಮುದಾಯ ಭವನದ ಹಿಂಭಾಗ ಹಂದಿ ನಾಗಣ್ಣ ಅವರ ತೋಟದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಪಂಚವಟಿ ಗಿಡಗಳನ್ನು ರೈತರಿಗೆ ವಿತರಿಸಿ ಮಾತನಾಡಿ, ಪರಿಸರ ರಕ್ಷಣೆ ಮತ್ತು ಸಾವಯವ ಜೀವನಶೈಲಿಯು ಆರೋಗ್ಯದಲ್ಲಿನ ಸಮತೋಲನ ಕಾಪಾಡಲು ಅವಶ್ಯಕವಾಗಿದೆ ಎಂದರು.
ರೈತರಿಗೆ ವೈಜ್ಞಾನಿಕ ಚಿಂತನೆ ಇಲ್ಲದೇ ಕೃಷಿ ಭೂಮಿಗೆ ಹೆಚ್ಚು ನೀರು ನಿಲ್ಲಿಸುವ ಜೊತೆಗೆ ಹೆಚ್ಚಿನ ರಾಸಾಯನಿಕ ಗೊಬ್ಬರವನ್ನು ಹಾಕಿ ಭೂಮಿಯ ಸತ್ವವನ್ನು ಕಡಿಮೆಗೊಳಿಸುತ್ತಿದ್ದಾರೆ. ಅತಿಯಾದ ಕೀಟನಾಶಕ ಬಳಕೆಯಿಂದ ಬೆಳೆದ ಆಹಾರ ಪದಾರ್ಥಗಳ ಸೇವನೆಯಿಂದ ಪ್ರತಿಯೊಬ್ಬರಲ್ಲಿಯೂ ಅನಾರೋಗ್ಯ ಕಾಡುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೇ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಭೂಮಿ ಉಳಿಸಲು ರಾಸಾಯನಿಕ ಗೊಬ್ಬರಗಳ ಬಳಕೆ ನಿಲ್ಲಿಸಬೇಕು. ಸಾವಯವ ಗೊಬ್ಬರ ಮತ್ತು ಎರೆಹುಳು ಗೊಬ್ಬರವನ್ನು ಭೂಮಿಗೆ ಸಿಂಪಡಿಸಿ ಭೂಮಿ ಫಲವತ್ತತೆಯನ್ನು ಹೆಚ್ಚಿಸಬೇಕು. ಸಾವಯವ ಕೃಷಿಯಿಂದ ಬೆಳೆದ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಕಡಿಮೆಗೊಳಿಸಬೇಕು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಇತ್ತಿಚಿನ ದಿನಗಳಲ್ಲಿ ಮರಗಳನ್ನು ಕಡಿಯುತ್ತಿದ್ದಾರೆ ಹೊರತು ಗಿಡಬೆಳೆಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದಿಂದ ಒಬ್ಬರಿಗೆ ಬಿಲ್ವ ಬೇವು, ಅರಳಿ, ಬನ್ನಿ, ಅತ್ತಿ ಪಂಚವಟಿ ಗಿಡಗಳನ್ನು ನೀಡಿ ಉಳಿಸಿ ಬೆಳೆಸಲು ಪ್ರೇರೆಪಿಸಲಾಗುತ್ತಿದೆ ಎಂದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಳಿ ಸೇರಿದಂತೆ ಅನೇಕ ಗಿಡಗಳನ್ನು 108 ರೈತರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಚಿಕ್ಕಣ್ಣ, ನಿರ್ದೇಶಕರಾದ ನಾಗರಾಜು, ಎಚ್.ವಿ.ವೀರಭದ್ರು, ಎಚ್.ವಿ.ಕೇಶವಮೂರ್ತಿ, ಕಪನಿಗೌಡ್ರು, ಹಂದಿ ನಾಗಣ್ಣ ಪಾಲ್ಗೊಂಡಿದ್ದರು.