ಸಾರಾಂಶ
ಅವೈಜ್ಞಾನಿಕ ಜಿಎಸ್ಟಿಯನ್ನು ಈಗ ಇಳಿಕೆ ಮಾಡಿರುವ ಬಗ್ಗೆ ಅಭಿಯಾನ ನಡೆಸುತ್ತಿರುವುದು ಬಿಜೆಪಿಯ ಬಿಹಾರ ಚುನಾವಣೆಯ ಗಿಮಿಕ್ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಸರ್ಕಾರ 8 ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಅವೈಜ್ಞಾನಿಕ ಜಿಎಸ್ಟಿಯನ್ನು ಈಗ ಇಳಿಕೆ ಮಾಡಿರುವ ಬಗ್ಗೆ ಅಭಿಯಾನ ನಡೆಸುತ್ತಿರುವುದು ಬಿಜೆಪಿಯ ಬಿಹಾರ ಚುನಾವಣೆಯ ಗಿಮಿಕ್ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ಜಿಎಸ್ಟಿ ಜಾರಿಗೊಳಿಸಿದಾಗ ಇಡೀ ವಿಶ್ವದಲ್ಲೇ ಇಂತಹ ಜಿಎಸ್ಟಿ ಪ್ರಥಮ ಎಂದು ಸಂಭ್ರಮಿಸಿದವರು ಇಂದು ಜಿಎಸ್ಟಿ ಇಳಿಕೆ ಮಾಡಿದಾಗ ಅಭಿಯಾನ ನಡೆಸುತ್ತಿರುವುದು ಕೇವಲ ನಾಟಕ. ಕಳೆದ 8 ವರ್ಷಗಳಲ್ಲಿ ಭಾರೀ ಪ್ರಮಾಣದ ಜಿಎಸ್ಟಿ ವಿಧಿಸಿ ಜನರಿಂದ ಕೊಳ್ಳೆ ಹೊಡೆದಿರುವ ಹಣವನ್ನು ಏನು ಮಾಡಲಾಗಿದೆ? ಜನರಿಗೆ ಆ ಹಣವನ್ನು ಮರುಪಾವತಿ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಅಧಿಕಾರವಧಿಯಲ್ಲಿ ಸರಳೀಕೃತ ಜಿಎಸ್ಟಿ ತರಬೇಕು ಎಂದಾಗ ಅದನ್ನು ಬಿಜೆಪಿ ವಿರೋಧಿಸಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿಯೂ ಜಿಎಸ್ಟಿಯನ್ನು ವಿರೋಧಿಸಿತ್ತು. ಕೊನೆಗೇ ಅವರೇ ಅವೈಜ್ಞಾನಿಕವಾಗಿ ಜಾರಿಗೊಳಿಸಿದ್ದರು ಎಂದು ಮಂಜುನಾಥ ಭಂಡಾರಿ ಹೇಳಿದರು.ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ತೆರಿಗೆ ಎಂದು ಜಿಎಸ್ಟಿ ಇಳಿಕೆ ಬಗ್ಗೆ ಬಿಜೆಪಿ ಅಂಧ ಭಕ್ತರು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೇ ಅವರನ್ನು ವಾಟ್ಸಪ್ ಯುನಿವರ್ಸಿಟಿಯ ಅಂಧಭಕ್ತರು ಎನ್ನುವುದು. 2017ರಲ್ಲಿ ಯಾರ ಸರ್ಕಾರ ಜಿಎಸ್ಟಿ ಜಾರಿಗೆ ತಂದಿದ್ದು ಎಂಬುದೇ ಅವರಿಗೆ ಅರಿವಿಲ್ಲ ಎಂದು ಲೇವಡಿ ಮಾಡಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಘಟಕದ ನಗರ ವಿಭಾಗ ಅಧ್ಯಕ್ಷೆ ಅಪ್ಪಿ, ಮುಖಂಡರಾದ ಸುಭಾಷ್ ಕೊಲ್ನಾಡ್, ಶಾಹುಲ್ ಹಮೀದ್, ಸುಹಾನ್ ಆಳ್ವ, ಎಂ.ಎಸ್. ಮುಹಮ್ಮದ್, ನವಾಝ್, ಚಿತ್ತರಂಜನ್ ಶೆಟ್ಟಿ ಇದ್ದರು.