ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಬಾಳೆಹೊನ್ನೂರು ಹೋಬಳಿ ಹಾಗೂ ಮುತ್ತಿನಕೊಪ್ಪ ಕಸಬಾ ಹೋಬಳಿಗಳಲ್ಲಿ ಗ್ಯಾರಂಟಿ ಯೋಜನೆಯ ಸಮಾವೇಶಗಳನ್ನು ಆಯೋಜಿಸಲು ಜಿಲ್ಲಾ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಾಪಂ ಇಒ ಎಚ್.ಡಿ.ನವೀನ್ಕುಮಾರ್ ತಿಳಿಸಿದರು.ತಾಪಂ ಸಾಮರ್ಥ್ಯಸೌಧದಲ್ಲಿ ಮಂಗಳವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಕು.ಚಂದ್ರಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಜಿಲ್ಲಾ ಸಮಾವೇಶಕ್ಕೆ ಸಜ್ಜಾಗಿದೆ. ನಂತರ ಶಾಸಕರ ನೇತೃತ್ವದಲ್ಲಿ ಕ್ಷೇತ್ರ ಮಟ್ಟದ ಸಮಾವೇಶವೂ ಕೂಡ ನಡೆಯಲಿದೆ ಎಂದರು.
ಅದಕ್ಕೂ ಮುನ್ನ ಬಾಳೆಹೊನ್ನೂರು ಹೋಬಳಿ ಸಮಾವೇಶವನ್ನು ಬಾಳೆಹೊನ್ನೂರು ಸಮುದಾಯ ಭವನದಲ್ಲಿ ಹಾಗೂ ಮುತ್ತಿನಕೊಪ್ಪ ಕಸಬಾ ಹೋಬಳಿ ಸಮಾವೇಶವನ್ನು ಎನ್.ಆರ್.ಪುರದ ಗುರುಭವನದಲ್ಲಿ ಆಯೋಜಿಸಲಾಗುವುದು. ಶೀಘ್ರವಾಗಿ ದಿನಾಂಕವನ್ನು ನಿಗದಿಪಡಿಸಿ ಮತ್ತೊಂದು ಸಭೆ ಕರೆಯಲಾಗುವುದು. ತಾಲೂಕಿನಲ್ಲಿ ಒಟ್ಟು 137 ಅಂಗನವಾಡಿ ಕೇಂದ್ರಗಳಿವೆ. ಬಾಳೆಹೊನ್ನೂರು ಹೋಬಳಿಯಲ್ಲಿ 73 ಹಾಗೂ ಮುತ್ತಿನಕೊಪ್ಪ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 64 ಅಂಗನವಾಡಿ ಕೇಂದ್ರಗಳಿವೆ. ಈ ಕೇಂದ್ರಗಳ ವ್ಯಾಪ್ತಿಯಿಂದ ಕನಿಷ್ಠ 10 ಜನ ಫಲಾನುಭವಿಗಳು ಬರುವಂತೆ ಸಂಬಂಧಪಟ್ಟ ಸಿಡಿಪಿಒ ಇಲಾಖೆಯವರು ನೋಡಿಕೊಳ್ಳಬೇಕು ಎಂದು ಹೇಳಿದರು.ಚಿಕ್ಕಮಗಳೂರು ಸರ್ಕಾರಿ ಬಸ್ ಡಿಪೋ ಅಧಿಕಾರಿ ವಸಂತ್ಕುಮಾರ್ ಮಾತನಾಡಿ, ಸರ್ಕಾರಿ ಬಸ್ಸುಗಳು ಕೇವಲ ಎರಡು ಮೂರು ನಿಮಿಷ ವ್ಯತ್ಯಾಸವಾಗಿ ಬಂದರೆ ಖಾಸಗಿ ಬಸ್ನವರು ವಾದ ಮಾಡಿ ಜಗಳಕ್ಕೆ ನಿಲ್ಲುತ್ತಾರೆ. ಕೆಲವು ದಿನ ಮಾತ್ರ ಸಮಯ ವಿಳಂಬವಾಗಬಹುದು ಎಂದರು.
ಸಮಿತಿ ಸದಸ್ಯ ಇಂದಿರಾ ನಗರ ರಘು ಮಾತನಾಡಿ, ಸರ್ಕಾರಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುವುದೇ ಇಲ್ಲ. ಸಮಯಕ್ಕೆ ಸರಿಯಾಗಿ ಬರುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಸದಸ್ಯ ನಿತ್ಯಾನಂದ ಮಾತನಾಡಿ, ಖಾಸಗಿ ಬಸ್ಸಿನ ಮಾಲೀಕರಿಗೆ ಬಹಳ ಕಷ್ಟಗಳಿರುತ್ತವೆ. ರಸ್ತೆ ತೆರಿಗೆ, ವಾಹನ ವಿಮೆ, ಸಂಬಳ ಎಲ್ಲವನ್ನೂ ಸಮತೋಲನ ಮಾಡಬೇಕು. ಖಾಸಗಿ ಬಸ್ಸುಗಳು ಬರುವ ಸಮಯಕ್ಕೇ ನಿಮ್ಮ ಬಸ್ಸುಗಳು ಸಮಯ ಬಿಟ್ಟು ಬಂದರೆ ಎಲ್ಲರಿಗೂ ತೊಂದರೆಯಾಗುತ್ತದೆ ಎಂದರು.
ಸದಸ್ಯ ಇಂದಿರಾನಗರ ರಘು, ಅಪೂರ್ವ, ನಿತ್ಯಾನಂದ, ಬೇಸಿಲ್, ಟಿ.ಟಿ.ಇಸ್ಮಾಯಿಲ್, ಜಯರಾಂ, ನಾಗರಾಜ್, ಸೈಯದ್ಶಫೀರ್ಅಹಮ್ಮದ್, ಬಿಇಓ ಶಬಾನಾ ಅಂಜುಮ್, ಬಿಸಿಎಂ ಇಲಾಖೆ ಅಧಿಕಾರಿ ಧರ್ಮರಾಜ್, ಸಾಗರ್, ಸುನೀಲ್, ಯೋಜನೆಯ ಅನುಷ್ಠಾನ ಇಲಾಖೆ ಅಧಿಕಾರಿಗಳು ಇತರರು ಇದ್ದರು.