ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ (ಬೀದರ್)
ಸಮಾಜದಲ್ಲಿ ಶಾಂತಿ ಸೌಹಾರ್ದತೆ ಹಾಗೂ ಸಹೋದರತ್ವ ಕಾಪಾಡುವ ದೃಷ್ಟಿಯಲ್ಲಿ ನಮ್ಮ ಸರ್ಕಾರ ಎಲ್ಲರ ಏಳ್ಗೆಗಾಗಿ ಶ್ರಮಿಸುತ್ತಿದೆ. ಕಳೆದ ಚುನಾವಣೆಯಲ್ಲಿ ನಮಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸರ್ವ ಜನಾಂಗದ ಜನರು ಮುಂಬರುವ ದಿನಗಳಲ್ಲಿಯೂ ನಮಗೆ ಆಶೀರ್ವದಿಸುವ ಭರವಸೆ ಇದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.ಬಸವಕಲ್ಯಾಣದ ಥೇರ್ ಮೈದಾನದಲ್ಲಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಡೆದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ್ದಾರೆ ಎಂದರು.
ಸಾವಿರಾರು ಕೋಟಿ ರು.ಗಳ ಅನುದಾನದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಮಾಡಿರುವುದಲ್ಲದೆ ರಾಜ್ಯದ ಅಭಿವೃದ್ಧಿಗೆ ಸತತ ಯೋಜನೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ಬಡವರ, ಮಹಿಳೆಯರ ಹಾಗೂ ಯುವಜನತೆಯ ಪರವಾದ ಸರ್ಕಾರ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಇದಕ್ಕೆ ರಾಜ್ಯದ ಜನತೆ ಮುಂದೆಯೂ ನಮಗೆ ಸಹಕರಿಸುತ್ತಾರೆ ಎಂಬ ಭರವಸೆ ಇದೆ ಎಂದು ಈಶ್ವರ ಖಂಡ್ರೆ ನುಡಿದರು.ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಜನರಲ್ಲಿ ವೈಷಮ್ಯ ಬೆಳೆಸುವಂಥ ಕೆಲ ಕೋಮುವಾದಿಗಳಿಂದ ನಡೆದಿರುವ ಘಟನೆಗಳನ್ನು ಜನರು ಅರಿತು ಜಾಗೃತಗೊಳ್ಳಬೇಕಿದೆ. ಸಮಾಜದ ಸ್ವಾಸ್ಥ್ಯಹದಗೆಡೆಸುವವರಿಗೆ ಜನ ಸೊಪ್ಪು ಹಾಕಬಾರದು. ಜನ, ಜಾತಿ ಧರ್ಮದ ಮಧ್ಯ ವಿಷ ಬೀಜ ಬಿತ್ತುವವರನ್ನು ದೂರವಿಡಬೇಕು ಎಂದು ಕರೆ ನೀಡಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಎಲ್ಲ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಿಸುವುದು ಮತ್ತು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವದು ಮಹಿಳಾ ವಿವಿಗೆ ಅಕ್ಕಮಹಾದೇವಿ ವಿವಿ ಎಂದು ನಾಮಕರಣ ಮಾಡುವ ಮೂಲಕ ಬಸವಾದಿ ಶರಣರನ್ನು ಸ್ಮರಿಸುವಂತೆ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.ಕಬೀರ, ಮೀರಾಬಾಯಿಯಂತೆ ಪಠ್ಯದಲ್ಲಿ ಬಸವಾದಿ ಶರಣರ ತತ್ವಗಳ ಓದಿಸಲಿ: ನಮ್ಮ ಕರ್ನಾಟಕದ ಮಕ್ಕಳು ಉತ್ತರ ಭಾರತದ ಕಬೀರ, ಮೀರಾಬಾಯಿ ಅವರನ್ನು ಓದುತ್ತೇವೆ. ಆದರೆ ಉತ್ತರ ಕರ್ನಾಟಕದ ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಕಬೀರ, ಸಂಗೊಳ್ಳಿ ರಾಯಣ್ಣ ಅವರನ್ನು ಇಂದಿನ ಮಕ್ಕಳು ತಮ್ಮ ಪಠ್ಯ ಕ್ರಮದಲ್ಲಿ ಓದುವಂತೆ ಮಾಡಬೇಕು ಎಂದು ಸಿಎಂಗೆ ಆಗ್ರಹಿಸಿದರು.
ಗೋ.ರು. ಚನ್ನಬಸಪ್ಪ ಅವರು ಅಭಿನಂದನಾ ನುಡಿ ಹೇಳಿ, ನೂತನ ಅನುಭವ ಮಂಟಪ ನಿರ್ಮಾಣದ ಮೊಟ್ಟ ಮೊದಲ ಕಲ್ಪನೆ ಸಿಎಂ ಸಿದ್ದರಾಮಯ್ಯ ಅವರದ್ದು. 600 ಕೋಟಿ ರು.ಗಳ ಅನುಭವ ಮಂಟಪ ನಿರ್ಮಾಣಕ್ಕೆ ತಜ್ಞರ ಸಮಿತಿ ನೇಮಿಸಿದ್ದು, ಇದೀಗ ಅದಕ್ಕೆ ಅನುದಾನ ಬಿಡುಗಡೆ ಮಾಡುವುದಲ್ಲದೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ವಿಜಯಪೂರ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರನ್ನಿಟ್ಟಿದ್ದಲ್ಲದೆ ಅನೇಕ ರೀತಿಯಲ್ಲಿ ಸ್ಮರಿಸುವಂತೆ ಮಾಡಿದ್ದು ಶ್ಲಾಘನೀಯ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸನ್ಮಾನ ಪತ್ರವನ್ನು ಯುವ ಮುಖಂಡ ಸಾಗರ ಖಂಡ್ರೆ ಓದಿದರು.