ಸಾರಾಂಶ
ಬ್ಯಾಡಗಿ: ಕೇವಲ ಅಧಿಕಾರಕ್ಕೆ ಬರುವ ಉದ್ದೇಶದಿಂದ ಮಾತ್ರ 5 ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿಲ್ಲ. ಬದಲಾಗಿ ಬಡವರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ನಮ್ಮ ಸರ್ಕಾರ ಜನರಿಗೆ ಅವಶ್ಯವಿರುವುದನ್ನು ನೀಡುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಸೋಮವಾರ ಶಕ್ತಿ ಯೋಜನೆಯಡಿ ರಾಜ್ಯದಾದ್ಯಂತ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಓಡಾಡಿದವರ ಸಂಖ್ಯೆ 500 ಕೋಟಿ ತಲುಪಿದ ಹಿನ್ನೆಲೆ ಸ್ಥಳೀಯ ಸಾರಿಗೆ ಘಟಕ ಪಟ್ಟಣದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಬಹಳಷ್ಟು ಬಹುತೇಕ ಬಡ ಕುಟುಂಬಗಳು ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ದಿನನಿತ್ಯದ ಬೆಲೆ ಏರಿಕೆಯ ಹೊರೆಯಿಂದಾಗಿ ಬಡ ಕುಟುಂಬಗಳು ಬೀದಿಗೆ ಬಂದು ನಿಲ್ಲುವಂತಾಗಿದೆ. ಇದರಲ್ಲಿ ಯಾವುದೋ ಆಡಳಿತಾರೂಢ ಸರ್ಕಾರಗಳನ್ನು ಹೊಣೆಯನ್ನಾಗಿ ಮಾಡುವುದಿಲ್ಲ. ಆದರೆ ವಾಸ್ತವ ಸಂಗತಿಗಳಿಗೆ ಬೇರೆಯಾಗಿದ್ದು, ಅವರ ಆದಾಯಕ್ಕಿಂತ ಹೆಚ್ಚು ಖರ್ಚುಗಳಿದ್ದು, ಈ ಹಿನ್ನೆಲೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದೆ ಎಂದರು.
ಬ್ಯಾಡಗಿ ಸಾರಿಗೆ ಘಟಕದಿಂದ ಗ್ರಾಮೀಣ ಸಾರಿಗೆ ಹಾಗೂ ಎಕ್ಸ್ಪ್ರೆಸ್ ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ಒಟ್ಟು 1,58,06,298 ಮಹಿಳಾ ಪ್ರಯಾಣಿಕರು ಬಸ್ ಗಳಲ್ಲಿ ಸಂಚರಿಸಿದ್ದು, ಒಟ್ಟು ಇದರ ಬಾಬ್ತು ₹49.61 ಕೋಟಿಗಳನ್ನು ರಾಜ್ಯ ಸರ್ಕಾರ ವ್ಯಯಿಸಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕಪ್ಪ ಹಾದಿಮನಿ, ಬೀರಪ್ಪ ಬಣಕಾರ, ದುರ್ಗೇಶ ಗೋಣೆಮ್ಮನವರ, ಮುನಾಫ್ ಎರೇಶೀಮಿ, ಶೋಭಾ ಅಂಗಡಿ, ಆರ್.ಜಿ. ಕಳ್ಳಾಳ, ಸೋಮಣ್ಣ ಸಂಕಣ್ಣನವರ, ರಮೇಶ ಸುತ್ತಕೋಟಿ, ವೀರನಗೌಡ್ರ ಪಾಟೀಲ, ಸುಶೀಲಾ ಲಮಾಣಿ, ಸುರೇಶಗೌಡ್ರ ಪಾಟೀಲ, ಚಂದ್ರಪ್ಪ ಬಾರ್ಕಿ, ಡಾ. ಸೌದಾಗರ, ಸುರೇಶ ಹುಳಬುತ್ತಿ, ಖಾದರಸಾಬ್ ದೊಡ್ಮನಿ, ಮಜೀದ ಮುಲ್ಲಾ, ಪೀರಾಂಬಿ ವರ್ದಿ ಸೇರಿದಂತೆ ಘಟಕ ವ್ಯವಸ್ಥಾಪಕ ಗುರುಬಸಪ್ಪ ಅಡರಗಟ್ಟಿ, ಸಿಬ್ಬಂದಿಗಳಾದ ಎಂ.ಜಿ. ಬೆನ್ನೂರ, ರಂಗನಾಥ ಹೊಸದುರ್ಗ ಇತರರಿದ್ದರು.