ಕನ್ನಡಪ್ರಭ ವಾರ್ತೆ ಸಕಲೇಶಪುರಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಗೌರವಯುತ ಬದುಕು ನಡೆಸಲು ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಮಂಗಳವಾರ ಪಟ್ಟಣದ ಹಳೇಬಸ್ ನಿಲ್ದಾಣ ಎಸ್‌ಬಿಎಂ ಸರ್ಕಲ್ ಹಾಗೂ ಹೇಮಾವತಿ ಪ್ರತಿಮೆ ಸಮೀಪ ಫುಡ್‌ಕೋರ್ಟ್‌, ಹೂವು, ಹಣ್ಣು ವ್ಯಾಪಾರಿಗಳಿಗೆ ಮಳಿಗೆ ನಿರ್ಮಿಸಲು ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸುಮಾರು ೧.೧೦ ಕೋಟಿ ವೆಚ್ಚದಲ್ಲಿ ವಿಜಯಬ್ಯಾಂಕ್ ವಾಣಿಜ್ಯ ಸಂಕೀರ್ಣದ ಮುಂಭಾಗ ಹೂವು ಹಾಗೂ ಹಣ್ಣು ವ್ಯಾಪಾರಿಗಳಿಗೆ ಅಂಗಡಿಗಳ ನಿರ್ಮಾಣ, ಎಸ್‌ಬಿಎಂ ಸರ್ಕಲ್ ಹಾಗೂ ಹೇಮಾವತಿ ಸೇತುವೆ ಸಮೀಪದ ಹೇಮಾವತಿ ಪ್ರತಿಮೆ ಬಳಿ ಫುಡ್‌ಕೋರ್ಟ್‌ ನಿರ್ಮಿಸುವ ಮೂಲಕ ಹತ್ತಾರು ವರ್ಷಗಳಿಂದ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಸ್ವಾಭಿಮಾನದ ಬದುಕು ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದಲ್ಲದೆ ಎಸ್‌ಬಿಎಂ ಸರ್ಕಲ್ ಸಮೀಪ ೧೪ ಅಡಿ ಎತ್ತರದ ಅಶೋಕ ಸ್ತಂಭ ಹಾಗೂ ಹೇಮಾವತಿ ಪ್ರತಿಮೆ ಬಳಿ ೪೫ ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಲಾಗುತ್ತಿದ್ದು ಇದಲ್ಲದೆ ಹಿಂದಿನ ಸಬ್ ರಿಜಿಸ್ಟ್ರಾರ್‌ ಕಚೇರಿ ಎದುರು ಬಸ್ ಶೆಲ್ಟರ್‌ ಹಾಗೂ ಹಳೇ ಬಸ್ ನಿಲ್ದಾಣ ಸಮೀಪ ಆಟೋ ನಿಲ್ದಾಣ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಾಗಿದ್ದು ಕೆಆರ್‌ಡಿಸಿಎಲ್ ಅನುದಾನದಲ್ಲಿ ಈ ಎಲ್ಲ ಕಾಮಗಾರಿಗಳಿಗೆ ಕಳೆದ ಆರು ತಿಂಗಳ ಹಿಂದೆ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಪುರಸಭೆ ಮಾಜಿ ಸದಸ್ಯೆ ವನಜಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.