ಗುಡ್ಡೆಹೊಸೂರು: ಗೌಡ ಸಮಾಜದ ವಾರ್ಷಿಕ ಮಹಾಸಭೆ

| Published : Oct 31 2025, 03:15 AM IST

ಸಾರಾಂಶ

ಅರೆಭಾಷೆ ಗೌಡ ಸಮಾಜದ ವಾರ್ಷಿಕ ಮಹಾಸಭೆ ಸಮಾಜದ ನಿವೇಶನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಇಲ್ಲಿನ ಅರೆಭಾಷೆ ಗೌಡ ಸಮಾಜದ 11ನೇ ವರ್ಷದ ವಾರ್ಷಿಕ ಮಹಾಸಭೆಯು ಸಮಾಜದ ಅಧ್ಯಕ್ಷರಾದ ಗುಡ್ಡೆಮನೆ ವಿಶುಕುಮಾರ್‌ ಅಧ್ಯಕ್ಷತೆಯಲ್ಲಿ ಸಮಾಜದ ನಿವೇಶನದಲ್ಲಿ ನಡೆಯಿತು.

ಈ ಸಂದರ್ಭ ಮುಖ್ಯ ಭಾಷಣಕಾರರಾಗಿ ಹಿರಿಯ ಕಲಾವಿದರಾದ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಮಹಿಳಾ ಸಮಾಜದ ಗೌರವ ಅಧ್ಯಕ್ಷರಾದ ದೇವಜನ ಗೀತಾ ಮೋಂಟಡ್ಕ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ನಮ್ಮ ಜನಾಂಗದ ಆಚಾರ, ಪದ್ಧತಿ, ಪರಂಪರೆ ಮತ್ತು ಭಾಷೆಯ ಬಗ್ಗೆ ಪೋಷಕರು ತಿಳಿಸಬೇಕು. ಅಲ್ಲದೆ ಮನೆಯಲ್ಲಿ ಅರೆಭಾಷೆಯನ್ನೆ ಮಾತನಾಡಲು ಮಕ್ಕಳಿಗೆ ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಕೊಡಗು ಗೌಡ ಫೆಡರೇಶನ್‌ ಕಾರ್ಯದರ್ಶಿ ಪೆರಿಯನ ಉದಯ ಮಾತನಾಡಿ, ಗುಡ್ಡೆಹೊಸೂರಿನ ಗೌಡಸಮಾಜದ ನಿವೇಶನಲ್ಲಿ ಸಮುದಾಯಭವನ ನಿರ್ಮಿಸಲು ಫೆಡರೇಶನ್‌ ನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸಮುದಾಯ ಭವನ ನಿರ್ಮಾಣ ಮಾಡಿ ಸಾರ್ವಜನಿಕರು ಸಭೆ ಸಮಾರಂಭ ಮಾಡಲು ಅನುಕೂಲ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂಬುದಾಗಿ ವಿವರಿಸಿದರು.

ಈ ಸಂದರ್ಭ ಮತ್ತೊಬ್ಬ ಅತಿಥಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷರಾದ ವಿ.ಪಿ.ಶಶಿಧರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗೌಡ ಜನಾಂಗದವರು ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವ ಬಗ್ಗೆ ಅಲ್ಲದೆ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಬಗ್ಗೆ ವಿವರಿಸಿದರು.

ಈ ಸಂದರ್ಭ ಮಕ್ಕಳಿಗೆ ಪ್ರತಿಭ ಪುರಾಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟು ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಸಮಾಜದ ಸದ್ಯಸರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಉಪಾಧ್ಯಕ್ಷೆ ಬೊಮ್ಮೆಗೌಡನ ಭುವನೇಶ್ವರಿ, ಕಾರ್ಯದರ್ಶಿತಾರಹೇಮರಾಜ್, ಸಹಕಾರ್ಯದರ್ಶಿ ಬೋಮ್ಮುಡೀರ ಬಾಲಕೃಷ್ಣ, ನಿರ್ದೇಶಕರಾದ ಕುಡೆಕ್ಕಲು ಗಣೇಶ್‌, ಚಂಡೀರ ಮಂಜುನಾಥ್‌, ಕನ್ನಯ್ಯುನ ಬಾಲಕೃಷ್ಣ, ಮಂದೋಡಿಜಗನ್ನಾಥ್‌, ಗುಡ್ಡೆಮನೆ ಜಯವಿಶುಕುಮಾರ್‌, ಕಳಂಜನ ದಾದಪ್ಪ, ನಡುಮನೆ ಪವನ್‌, ಅಲ್ಲದೆ ಸಲಹಾ ಸಮಿತಿ ಸದಸ್ಯರಾದ ಅಚ್ಚಾಂಡೀರಾ ಹೇಮರಾಜ್‌, ಬೆದ್ರಂಗಾಲಭಾರತೀಶ್‌, ಮಂದೋಡಿ ಹೇಮಚಂದ್ರ, ಚೆರಿಯಮನೆ ಭರತ್‌ , ಬೊಟ್ಟಮನೆ ಸತ್ಯಕುಮಾರ್‌ ಹಾಜರಿದ್ದರು.

ಸತ್ಯಕುಮಾರ್‌ ಸ್ವಾಗತಿಸಿದರು. ಮಂಜುನಾಥ್‌ ವಂದಿಸಿದರು. ಕುಡೆಕ್ಕಲ್‌ ಗಣೇಶ್‌ ಕಾರ್ಯಕ್ರಮ ನಿರೂಪಿಸಿದರು.