ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಆಗ್ರಹ

| Published : Dec 14 2023, 01:30 AM IST

ಸಾರಾಂಶ

ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಿ

ಕನ್ನಡಪ್ರಭ ವಾರ್ತೆ ಇಂಡಿ

ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಿ ತರಗತಿಗಳನ್ನು ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಎಸಿ ಅಬೀದ್ ಗದ್ಯಾಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗಾಗಿ ಹೋರಾಟ ಹಮ್ಮಿಕೊಂಡಿದ್ದು, ಇದರಿಂದ ತರಗತಿಗಳು ನಡೆಯುತ್ತಿಲ್ಲ. ನಮ್ಮ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಪರೀಕ್ಷೆಗಳು ಸಮೀಪ ಇರುವುದರಿಂದ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಬಗೆಹರಿಸಿ, ತರಗತಿಗಳು ಆರಂಭವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಸರ್ಕಾರವನ್ನು ಆಗ್ರಹಿಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅತಿಥಿ ಉನ್ಯಾಸರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ನ.23ರಂದು ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದು, ಇದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೂ , ತರಗತಿಗಳು ನಡೆಯುತ್ತಿಲ್ಲ. ಕಳೆದ ಬಾರಿ ಕೋವಿಡ್ -19 ಸಂದರ್ಭದಲ್ಲಿ ಬೋಧನೆ ನಡೆಯದೇ ಕೆವಲ ಪಾಸ್ ಮಾಡಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಕುಂಠಿತಗೊಂಡಿದೆ. ಹೀಗಾಗಿ, ಸರ್ಕಾರ ಚುನಾವಣಾ ಪ್ರಚಾರ ವೆಳೆ ಅತಿಥಿ ಉಪನ್ಯಾಸಕ ಕಾಯಂ ಮಾಡಲಾಗುವುದು ಎಂದು ಹೇಳಿದ್ದರೂ ಅವರಿಗೆ ಇಲ್ಲಿಯವರೆಗೆ ಕಾಯಂಗೊಳಿಸುವುದಾಗಲಿ ಅಥವಾ ಸೇವಾಭದ್ರತೆ ನೀಡುವುದಾಗಲಿ ಮಾಡಿಲ್ಲ.ಕಳೆದ 15 ವರ್ಷಗಳಿಂದ ಉಪನ್ಯಾಕರು ತಮ್ಮ ಸೇವಾ ಮನೋಭಾವದಿಂದ ಸರ್ಕಾರ ನೀಡುವ ಕನಿಷ್ಠ ವೇತನ ಪಡೆದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೋಧನೆ ಮಾಡಿದ್ದಾರೆ. ಇಂದು ಪ್ರತಿಯೊಂದು ವಸ್ತುಗಳ ಬೆಲೆಕ್ಕೆ ಏರಿವೆ.ಉಪನ್ಯಾಸಕರ ಕುಟುಂಬ ನಿರ್ವಹಣೆ ನಡೆಸುವುದು ದುಸ್ತರವಾಗಿದೆ ಎಂದರು.

15-20 ವರ್ಷ ಸೇವೆ ಸಲ್ಲಿಸಿದರೂ ಇನ್ನು ಅತಿಥಿ ಉಪನ್ಯಾಸಕರೆಂದು ಕರೆಯುವುದು ವಿಷಾದದ ಸಂಗತಿ. ಕೂಡಲೆ ಸರ್ಕಾರ ,ಶಿಕ್ಷಣ ಸಚಿವರು ಅತಿಥಿ ಉಪನ್ಯಾಸರ ಹುದ್ದೆಗಳನ್ನು ಕಾಯಂಗೊಳಿಸಿ ಅವರ ಸೇವಾಭದ್ರತೆ ಹೆಚ್ಚಿಸಿ ಅವರ ಕುಟುಂಬಕ್ಕೆ ಆಸರೆಯಾಗಬೇಕು. ಒಂದು ವೇಳೆ ಕಾಯಂಗೊಳಿಸದಿದ್ದರೆ ವಿದ್ಯಾರ್ಥಿ ಪರಿಷತ್ತದಿಂದ ಹಾಗೂ ವಿವಿಧ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳಿಂದ ರಾಜ್ಯಾದ್ಯಂತ ಉಗ್ರಹೋರಾಟ ಮಾಡಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.

ಆಕಾಶ ಪಾಟೀಲ, ಪೂಜಾ ಸಾರವಾಡ, ಸದಾಶಿವ ಕಂಬಾರ, ಎಬಿವಿಪಿ ನಗರ ಕಾರ್ಯದರ್ಶಿ ಸಚೀನ ದಾನಗೊಂಡ, ಬಿ.ಎಚ್ ಬಗಲಿ, ಈರಣ್ಣಾ ಸಿಂದಗಿ, ಚಂದ್ರಕಾಂತ ಕಾಂಬಳೆ, ಅಭಿಜೀತ ಬಿರಾದಾರ, ವಿಶಾಲ ಸಿಂಧೆ, ಸಮರ್ಥ ಗಾಯಕವಾಡ, ಅಭಿಷೇಕ ಕ್ಷತ್ರಿ, ಚಿದಾನಂದ ತೋಳನೂರ, ಅರುಣ ಪೂಜಾರಿ, ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.