ಮಧುಗಿರಿ: ತಂದೆ-ತಾಯಿ ನಮಗೆ ಜನ್ಮ ನೀಡಿದರೆ ಗುರು ನಮ್ಮ ಬದುಕಿಗೆ ಮಾರ್ಗದರ್ಶನ ನೀಡಿ ಕೈ ಹಿಡಿದು ನಡೆಸುತ್ತಾರೆ ಎಂದು ಯೋಗ ಶಿಕ್ಷಕಿ ಅಶ್ವಿನಿ ಕಿರಣ್ ತಿಳಿಸಿದರು. ಇಲ್ಲಿನ ಹಳೇ ಸಂತೆ ಬೀದಿ ಮೈದಾನದಲ್ಲಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹೇಮಾವತಿ ವಲಯ ಮಧುಗಿರಿ ಶಾಖೆಯ ಶ್ರೀಪತಂಜಲಿ ಮಂದಿರದಲ್ಲಿ ಗುರುಪೌರ್ಣಮಿ ಅಂಗವಾಗಿ ಏರ್ಪಡಿಸಿದ್ದ ಭಾರತ ಮಾತೆ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು. ಯೋಗವು ದೇಹವನ್ನು ರೂಪಿಸಿದರೆ ಗುರುವು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಗುರು ಎಂದರೆ ನಮ್ಮ ಜೀವನದ ಶಾಶ್ವತ ದಾರಿದೀಪ, ನಮ್ಮೊಳಗಿನ ಸಾಮರ್ಥ್ಯವನ್ನು ಗುರುತಿಸಿ ಆತ್ಮವಿಶ್ವಾಸವನ್ನು ಬೆಳಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಯೇ ಗುರು. ಇಂತಹ ಗುರುವಿನ ಆಶೀರ್ವಾದ ನಮಗೆ ಸಿಕ್ಕರೆ ಜೀವನ ಸಾರ್ಥಕತೆ ಪಡೆಯುತ್ತದೆ ಎಂದರು. ಸಮಿತಿಯ ಹಿರಿಯ ಚೇತನ ಪುಟ್ಟನರಸಪ್ಪ, ನರಸಿಂಹಮೂರ್ತಿ, ಆನಂದ್, ಯೋಗಶಿಕ್ಷಕರು ಹಾಗೂ ಯೋಗ ಬಂಧುಗಳು ಇದ್ದರು.