ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುಂಡಿಕೆರೆ ಮಖಾಂ ವಾರ್ಷಿಕ ಉರೂಸ್ ಗೆ ವರ್ಣರಂಜಿತವಾಗಿ ತೆರೆ ಎಳೆಯಲಾಯಿತು. ಗುಂಡಿಕೆರೆಯ ಮಖಾಂನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿರವರ ಹೆಸರಿನಲ್ಲಿ ಪ್ರತಿ ವರ್ಷ ಅದ್ದೂರಿಯಿಂದ ನಡೆಯುವ ಗುಂಡಿಕೆರೆ ಮಖಾಂ ಉರೂಸ್ ಪ್ರಸಕ್ತ ವರ್ಷವೂ 3 ದಿನಗಳ ಕಾಲ ಆಯೋಜನೆಗೊಂಡಿತು.ಗುಂಡಿಕೆರೆ ಮಖಾಂ ಉರೂಸ್ ನ ಪ್ರಮುಖ ಆಕರ್ಷಣೆಯಾಗಿ ನಡೆದ ಸಾರ್ವಜನಿಕ ಸಮ್ಮೇಳನವನ್ನು ವಿರಾಜಪೇಟೆಯ ಅನ್ವಾರಲ್ ಹುದಾ ಸಂಸ್ಥೆಯ ಪ್ರಾಂಶುಪಾಲ ಅಶ್ರಫ್ ಅಹ್ಸನಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಮಾತನಾಡಿ, ಎಲ್ಲ ಸ್ನೇಹಕ್ಕಿಂತಲೂ ಮನುಷ್ಯ ಸ್ನೇಹ ಮೌಲ್ಯಯುತವಾದದ್ದು. ಇದನ್ನು ಯಾವ ಮಾನದಂಡಗಳಿಂದಲೂ ಅಳೆಯಲು ಸಾಧ್ಯವಿಲ್ಲ. ಮನುಷ್ಯ ಸ್ನೇಹದ ಮೂಲಕ ಎಷ್ಟೇ ಕಠಿಣವಾದ ವೈರಾಗ್ಯವನ್ನು ಕೂಡ ದೂರ ಮಾಡಬಹುದು. ಅಲ್ಲದೆ ಈ ಸ್ನೇಹವೇ ಮಾನವೀಯತೆಯ ಬದುಕಿಗೆ ತಳಹದಿ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಹಿರಿಯ ಧಾರ್ಮಿಕ ಪಂಡಿತರಾದ ಇಸ್ಮಾಯಿಲ್ ಸಖಾಫಿ ರಿಪ್ಪನ್ ಪ್ರಧಾನ ಭಾಷಣ ಮಾಡಿದರು. ಬೇಟೋಳಿ ಗ್ರಾಪಂ. ಸದಸ್ಯರಾದ ಎಂ. ಎಂ. ರಜಾಕ್, ಕೆದಮುಳ್ಳೂರು ಗ್ರಾ.ಪಂ. ಸದಸ್ಯರಾದ ಎಂ.ಎಂ. ಇಸ್ಮಾಯಿಲ್, ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎಂ. ವೈ. ಆಲಿ, ಕೋಶಾಧಿಕಾರಿಗಳಾದ ಎಂ. ಎಂ. ಆಲಿ ಮುಸ್ಲಿಯರ್ ಹಾಜಿ, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಸಿ.ಪಿ. ಆಲಿ ಸದಸ್ಯರಾದ ಸಿ.ಯು.ಮಹಮ್ಮದ್ ಹಾಜಿ, ಗುಂಡಿಕೆರೆ ಜಮಾಅತ್ತಿನ 1ನೇ ತಕ್ಕರಾದ ಸಿ.ಎ. ಹಸೈನಾರ್ ಹಾಜಿ, 2ನೇ ತಕ್ಕರಾದ ಎಂ.ಪಿ. ಶಾದಲಿ ಮೊದಲಾದವರು ಉಪಸ್ಥಿತರಿದ್ದರು. ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ನ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಯು. ಮಹಮ್ಮದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಗುಂಡಿಕೆರೆ ಜಮಾಅತ್ತಿನ ಖತೀಬರಾದ ಇಲ್ಯಾಸ್ ಅಂಜದಿ ನೇತೃತ್ವ ನೀಡಿದರು. ಎಂ.ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಮದರಸ ಅಧ್ಯಾಪಕರಾದ ತಾಜುದ್ದೀನ್ ಪೈಝಾನಿ ವಂದಿಸಿದರು. ಕಾರ್ಯಕ್ರಮದ ನಂತರ ಮೌಲೂದ್ ಪಾರಾಯಣ ಮತ್ತು ಸೇರಿದ ಸಾವಿರಾರು ಜನರಿಗೆ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ನ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಯು. ಮಹಮ್ಮದ್ ಹಾಜಿ ಧ್ವಜಾರೋಹಣದ ಮೂಲಕ ಗುಂಡಿಕೆರೆ ಮಖಾಂ ಉರೂಸ್ ಗೆ ಚಾಲನೆ ನೀಡಿದರು. ಉರೂಸ್ ನ ಸಮಾರೋಪದ ಅಂಗವಾಗಿ ಕೇರಳದ ಪ್ರಸಿದ್ಧ ಧಾರ್ಮಿಕ ಸಾಹಿತಿ ಡಾ. ಕೋಯ ಕಾಪಾಡ್ ಮತ್ತು ಸಂಗಡಿಗರಿಂದ ‘ಗ್ರಾಂಡ್ ಇಶಲ್ ನೈಟ್’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉರೂಸ್ ನ ಎಲ್ಲಾ ದಿನವೂ ಮಗರಿಬ್ ನಮಾಜಿನ ನಂತರ ಸಾಂಪ್ರದಾಯಿಕ ದಫ್ ಪ್ರದರ್ಶನ ಏರ್ಪಡಿಸಲಾಗಿತ್ತು.