ಸಾರಾಂಶ
ಗುಂಡ್ಲುಪೇಟೆಯ ಕಬಿನಿ ಎಕ್ಸ್ಪ್ರೆಸ್ ಲೈನ್ ಪೈಪ್ ಹೂಳಲು ಹೆದ್ದಾರಿ ಬದಿಯಲ್ಲಿ ಖಾಲಿ ಜಾಗವಿದ್ದರೂ ಹೆದ್ದಾರಿ ಬದಿಯ ಸರ್ವೀಸ್ ರಸ್ತೆ ಅಗೆದು ಪೈಪ್ ಹೂಳುತ್ತಿದ್ದಾರೆ. ಗುಣಮಟ್ಟದ ರಸ್ತೆ ಅಗೆದರೂ ಈ ಗುತ್ತಿಗೆದಾರರನ್ನು ಕೇಳುವವರು ಇಲ್ಲದಂತಾಗಿದೆ.
ಹೇಳೋರು, ಕೇಳೋರು ಯಾರು ಇಲ್ವೇ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಬಿನಿ ಎಕ್ಸ್ಪ್ರೆಸ್ ಲೈನ್ ಪೈಪ್ ಹೂಳಲು ಹೆದ್ದಾರಿ ಬದಿಯಲ್ಲಿ ಖಾಲಿ ಜಾಗವಿದ್ದರೂ ಹೆದ್ದಾರಿ ಬದಿಯ ಸರ್ವೀಸ್ ರಸ್ತೆ ಅಗೆದು ಪೈಪ್ ಹೂಳುತ್ತಿದ್ದಾರೆ. ಗುಣ ಮಟ್ಟದ ರಸ್ತೆ ಅಗೆದರೂ ಈ ಗುತ್ತಿಗೆದಾರರನ್ನು ಹೇಳೋರು, ಕೇಳೋರು ಯಾರು ಇಲ್ಲವೇ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ.ಕಬಿನಿ ಎಕ್ಸ್ಪ್ರೆಸ್ ಲೈನ್ ಪೈಪ್ ಹೂಳುವ ಕಾಮಗಾರಿ ಭರದಿಂದ ಮೈಸೂರು-ಊಟಿ ಹೆದ್ದಾರಿ ಬದಿ ನಡೆಯುತ್ತಿದೆ. ಆದರೆ ಗುತ್ತಿಗೆದಾರ ತನಗಿಷ್ಟ ಬಂದಂತೆ ಹೆದ್ದಾರಿ ಬದಿಯಿಂದ ಒಂದು ಮೀಟರ್ ನಿಂದ ಆರು ಮೀಟರ್ ತನಕ ಪೈಪ್ ಹೂತಿದ್ದಾರೆ. ಹೆದ್ದಾರಿ ಬದಿಯಲ್ಲಿ ಕಬಿನಿ ಎಕ್ಸ್ಪ್ರೆಸ್ ಲೈನ್ಗೆ ಪೈಪ್ ಹೂಳಲು ಸರ್ವೀಸ್ ರಸ್ತೆ ಬದಿ ಜಾಗವಿದ್ದರೂ ಗುತ್ತಿಗೆದಾರ ಒತ್ತುವರಿ ಮಾಡಿಕೊಂಡವರ ಮುಲಾಜಿಗೋ ಅಥವಾ ಆಮಿಷಕ್ಕೆ ಬಲಿಯಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರ್ವೀಸ್ ರಸ್ತೆ ಗುಣ ಮಟ್ಟದಿಂದ ಕೂಡಿದೆ. ಇಂಥ ರಸ್ತೆಯ ಮಧ್ಯದಲ್ಲಿ ಪೈಪ್ ಹೂಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಈ ಬಗ್ಗೆ ಸೊಲ್ಲೆತ್ತಬೇಕಾದ ಬೇಗೂರು ಗ್ರಾಪಂ ಕೇಳುತ್ತಿಲ್ಲ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದೂ ಇಲ್ಲದಂತೆ ಇದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬೇಗೂರು ಹೆದ್ದಾರಿ ಬದಿಯಲ್ಲಿ ಪೈಪ್ ಹೂಳಲು ಸಾಕಷ್ಟು ಜಾಗವಿದ್ದರೂ ಸರ್ವೀಸ್ ರಸ್ತೆಯ ಮಧ್ಯೆ ಹೂಳುತ್ತಿರುವ ಬಗ್ಗೆ ಶಾಸಕರು ಕೂಡ ಗಮನಹರಿಸಬೇಕು. ಸರ್ವೀಸ್ ರಸ್ತೆ ಬಿಟ್ಟು ಪೈಪ್ ಹೂಳಲಿ ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಹೆದ್ದಾರಿ ಬದಿಯೇ ಕೆಲವು ಕಡೆ ಪೈಪ್ ಹಾಕಿದ್ದಾರೆ. ಪೈಪ್ ಹೂಳುವಾಗ ಬಾಯುಳ್ಳವರು ಹೇಳಿದಂತೆ ಪೈಪ್ ಹಾಕುತ್ತಿದ್ದಾರೆ. ಹೆದ್ದಾರಿ ನಾಲ್ಕು ಪಥವಾದರೆ, ಈಗ ಹಾಕಿರುವ ಪೈಪ್ ಕಥೆ ಏನು ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ಸರ್ವೀಸ್ ರಸ್ತೆಯ ಮಧ್ಯೆ ಕಬಿನಿ ಪೈಪ್ ಲೈನ್ ಹಾಕುತ್ತಿದ್ದಾರೆ. ಈ ಬಗ್ಗೆ ಶಾಸಕರಾದ ಎಚ್.ಎಂ.ಗಣೇಶ್ ಪ್ರಸಾದ್ ಗಮನಕ್ಕೆ ತಂದಿದ್ದೇನೆ. ಸರ್ವೀಸ್ ರಸ್ತೆ ಬದಿ ಪೈಪ್ ಹಾಕಿದರೆ ಸರ್ವೀಸ್ ಉಳಿಯಲಿದೆ.-ಬಿ.ಎನ್.ಪುನೀತ್ ಕುಮಾರ್, ಗ್ರಾಪಂ ಸದಸ್ಯ