ಗುರು ಅಜ್ಞಾನ ಕಳೆದು ಸುಜ್ಞಾನ ಬೆಳಗಿಸಬಲ್ಲ

| Published : Jul 11 2025, 01:47 AM IST

ಸಾರಾಂಶ

ಮನುಷ್ಯ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು, ಸತ್ಸಂಗ, ಸಂತರ, ಗುರುವಿನ ಸಂಪರ್ಕದಲ್ಲಿದ್ದರೆ ಅಜ್ಞಾನ ದೂರವಾಗಿ ಸುಜ್ಞಾನವು ಪ್ರಜ್ವಲಿಸುವದು

ಗದಗ: ಮನುಷ್ಯನ ಅಜ್ಞಾನ ದೂರ ಮಾಡಿ ಸುಜ್ಞಾನದ ಬೆಳಕು ನೀಡುವ ಮೂಲಕ ಎಲ್ಲರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸಬಲ್ಲ ಅದಮ್ಯ ಶಕ್ತಿ ಗುರುವಿನಲ್ಲಿದೆ ಎಂದು ಶಿವಾನಂದ ಬೃಹನ್ಮಠದ ಜ.ಅಭಿನವ ಶಿವಾನಂದ ಸ್ವಾಮಿಗಳು ಹೇಳಿದರು.

ನಗರದಲ್ಲಿ ಗುರುವಾರ ಜಿಲ್ಲಾ ರಡ್ಡಿ ಸಮಾಜ ಸಂಘದಿಂದ ಗುರುಪೂರ್ಣೆಮೆ ಅಂಗವಾಗಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನಾ ಸ್ವೀಕರಿಸಿ ಮಾತನಾಡಿದರು.

ಗುರು ಬೇಕ ತಂಗಿ ಗುರುಬೇಕ ಎಂಬ ವಾಣಿಯಂತೆ ಎಲ್ಲರ ಜೀವನದಲ್ಲಿ ಗುರುವಿಗೆ ಅತ್ಯಂತ ಮಹತ್ವ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಜನ್ಮ ನೀಡಿದ ತಾಯಿ, ನೆಲೆ ಒದಗಿಸಿದ ಭೂಮಿ ಸ್ವರ್ಗಕ್ಕೂ ಮಿಗಿಲು. ತಾಯಿಯೇ ಮೊದಲ ಗುರು ಅಂತೆಯೇ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಹಾಗೂ ಅತಿಥಿ ದೇವೋಭವ ಎಂದು ಹೇಳುವ ಮೂಲಕ ಗುರುವಿಗೆ ದೈವಿ ಸ್ವರೂಪ ನೀಡಲಾಗಿದೆ ಎಂದರು.

ಮನುಷ್ಯ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು, ಸತ್ಸಂಗ, ಸಂತರ, ಗುರುವಿನ ಸಂಪರ್ಕದಲ್ಲಿದ್ದರೆ ಅಜ್ಞಾನ ದೂರವಾಗಿ ಸುಜ್ಞಾನವು ಪ್ರಜ್ವಲಿಸುವದು. ನಾವಿಂದು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ರೂಢಿಸಬೇಕು. ಅವರಲ್ಲಿ ಆಧ್ಯಾತ್ಮಿಕ,ವೈಚಾರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಬೆಳೆದು ಬರುವಂತೆ ತಂದೆ-ತಾಯಿಯರು, ಪೋಷಕರು ಮಾಡಬೇಕು ಎಂದರು.

ಮಹಾನ್ ಯೋಗಿ ವೇಮನ್ ಹಾಗೂ ಹೇಮರಡ್ಡಿ ಮಲ್ಲಮ್ಮ ಧರ್ಮ ಜಾಗೃತಿ, ವೈಚಾರಿಕ ಜಾಗೃತಿಯೊಂದಿಗೆ ಮನುಷ್ಯನ ಆದರ್ಶಮಯ ಬದುಕಿಗೆ ಬಹು ದೊಡ್ಡ ಮೌಲಿಕ ಸಾಹಿತ್ಯ,ತತ್ವ ಸಂದೇಶ ನೀಡಿದ್ದಾರೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಅಂದಾಗ ಮಾತ್ರ ನಮ್ಮ ಜೀವನ ಪಾವನ ಆಗಬಲ್ಲದು ಎಂದರು.

ಈ ವೇಳೆ ರಡ್ಡಿ ಸಮಾಜ ಸಂಘದ ಹಿರಿಯರು,ಸಮಾಜ ಬಾಂಧವರು, ಮಹಿಳೆಯರು ಜ.ಅಭಿನವ ಶಿವಾನಂದ ಸ್ವಾಮಿಗಳಿಗೆ ಶ್ರದ್ಧಾಭಕ್ತಿಯೊಂದಿಗೆ ಆರತಿ ಮಾಡಿ,ಗುರುಕಾಣಿಕೆ, ಫಲಪುಷ್ಪಗಳೊಂದಿಗೆ ಗುರುವಂದನೆ ಸಲ್ಲಿಸಿದರು. ನಿಂಗಪ್ಪ ದೇಸಾಯಿ ಹಾಗೂ ಬಾಬು ಮಲ್ಲನಗೌಡ್ರ ಮಾತನಾಡಿದರು.

ಎಸ್.ಎಚ್. ಶಿವನಗೌಡ್ರ ಸ್ವಾಗತಿಸಿ, ನಿರೂಪಿಸಿದರು. ರಾಘು ಹೊಸಮನಿ ದಂಪತಿಗಳು ಪೂಜ್ಯರ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಿದರು. ಮೋಹನ ಕಗದಾಳ ವಂದಿಸಿದರು.