ಕನಕಗಿರಿ: ಮನುಷ್ಯನ ಪಾಪ ಪರಿಹಾರವಾಗಬೇಕಾದರೆ ಗುರುವಿನ ಬಲ ಅಗತ್ಯವಾಗಿದೆ ಎಂದು ಹಿರಿಯ ಹಾರ್ಮೊನಿಯಂ ಕಲಾವಿದ ಪರಂಧಾಮರೆಡ್ಡಿ ಭೀರಹಳ್ಳಿ ಹೇಳಿದರು.

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀತೊಂಡಿತೇವರಪ್ಪ ದೇವಸ್ಥಾನದಲ್ಲಿ ಶ್ರೀರಾಘವೇಂದ್ರಸ್ವಾಮಿ ಭಜನಾ ಮಂಡಳಿಯಿಂದ ಹಮ್ಮಿಕೊಂಡಿದ್ದ ಗುರು ಪೂರ್ಣಮೆ ಅಂಗವಾಗಿ ಗುರುವಂದನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿ, ಪಾಪ, ಪುಣ್ಯಗಳು ಮನುಷ್ಯನಿಂದ ಹುಟ್ಟಿಕೊಂಡಿವೆಯೇ ಹೊರತು ದೇವರುಗಳಿಂದ ಅಲ್ಲ. ದೇವರೇ ಗುರುವಿನ ರೂಪದಲ್ಲಿ ಬಂದು ಮನುಷ್ಯನ ಪಾಪ ಪರಿಹಾರ ಮಾಡುತ್ತಾನೆ. ಹಾಗಾಗೀ ದೇವರಿಗಿಂತ ಗುರುವಿಗೆ ಮೊದಲ ಆದ್ಯತೆ ಇದೆ. ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಗುರುವಿಗೆ ದೊಡ್ಡ ಸ್ಥಾನವಿದೆ. ಜಗತ್ತಿನಲ್ಲಿ ಇಂತಹ ಅಪರೂಪದ ಪರಂಪರೆ ನಮ್ಮ ದೇಶದಲ್ಲಿ ಸಾವಿರಾರು ವರುಷಗಳಿಂದಲೂ ಇದೆ. ಗುರುಗಳಿಗೆ ಗೌರವಿಸುವುದು, ಗುರು ಕಾಣಿಕೆ ನೀಡಿ ಸತ್ಕರಿಸುವ ಕಾರ್ಯ ನಡೆಯುವುದು ಇಂದಿಗೂ ಪ್ರಚಲಿತದಲ್ಲಿದೆ. ದಾಸ ಹಾಗೂ ಶರಣ ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಆ ಕಿರ್ತನೆ, ವಚನಗಳಲ್ಲಿ ಅಡಗಿರುವ ಸಾರ ಅರ್ಥೈಸಿಕೊಂಡು ಜೀವನ ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಲಾವಿದರಾದ ತೊಂಡೆಪ್ಪ ಕುಂಡೇರ, ಪರಂಧಾಮರೆಡ್ಡಿ, ಕಂಠೆಪ್ಪ ಪೂಜಾರ ಹಾಗೂ ಹನುಮಂತರೆಡ್ಡಿ ಮಹಲಿನಮನಿ ಅವರನ್ನು ಸನ್ಮಾನಿಸಲಾಯಿತು.

ಪ್ರಾಕೃಪಸ ಸಂಘದ ನಿರ್ದೇಶಕ ಕನಕರೆಡ್ಡಿ ಕೆರಿ, ಭಜನಾ ಮಂಡಳಿಯ ಅಧ್ಯಕ್ಷ ರಾಮಣ್ಣ ಗುಂಜಳ್ಳಿ, ಸೂರ್ಯನಾರಾಯಣರೆಡ್ಡಿ ಮಹಲಿನಮನಿ, ಪಂಪಾಪತಿ ತುಪ್ಪದ, ಭೀಮರೆಡ್ಡಿ, ಅಂಭಾಜಿರಾವ್ ಬೊಂದಾಡೆ, ಸುರೇಶ ಬೊಂದಾಡೆ, ಶಿವಪ್ಪ ಅಂಕಸದೊಡ್ಡಿ, ಭೀಮರಾವ್ ಮರಾಠಿ, ರಮೇಶ ಶ್ರೇಷ್ಠಿ ಸಿರಿವಾರ, ಕಲೀಲಸಾಬ್‌, ವಿರೇಶ ವಸ್ತ್ರದ, ಗೋಪಾಲರೆಡ್ಡಿ ಓಣಿಮನಿ, ಶೇಖರಪ್ಪ ಕಮ್ಮಾರ, ಜಯತೀರ್ಥ ಕಳ್ಳಿ, ನವೀನ್ ಶ್ರೇಷ್ಠಿ, ವಿರೇಶ ಹೂಗಾರ ಸೇರಿದಂತೆ ಇತರರು ಇದ್ದರು.