ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಹೆತ್ತೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.1992ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಪ್ರಥಮ ತರಗತಿಗೆ ದಾಖಲಾಗಿ 2003ರಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ಹಿರಿಯ ವಿದ್ಯಾರ್ಥಿಗಳು, ಅಕ್ಷರಗಳ ಜೊತೆಗೆ ತಮ್ಮ ನಡೆ-ನುಡಿ ತಿದ್ದಿ, ಜೀವನಕ್ಕೆ ದಾರಿ ತೋರಿದ ಅರಿವಿನ ಗುರುಗಳನ್ನು ಸ್ಮರಿಸಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಅರ್ಪಿಸಿದರು. ಗುರುವಂದನಾ ಕಾರ್ಯಕ್ರಮದ ಕುರಿತು ಮಾತನಾಡಿದ ಶಾಲೆಯ ನಿವೃತ್ತ ಮುಖ್ಯಶಿಕ್ಷಕರಾದ ಸುರೇಶ್, ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅಪಾರ ಸಂತಸ ತಂದಿದೆ. ಕಲಿಕೆ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಶಿಕ್ಷಕರಾದ ವೆಂಕಟೇಶ್ ಮಾತನಾಡಿ, ಶತಮಾನದ ಹೊಸ್ತಿಲಲ್ಲಿರುವ ಹೆತ್ತೂರು ಸರ್ಕಾರಿ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ, ಅವರಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು. ಗುರುವಂದನಾ ಕಾರ್ಯಕ್ರಮದ ಮೂಲಕ ಸುಮಾರು 25 ವರ್ಷಗಳ ನಂತರ ಭೇಟಿಯಾದ ಸಹಪಾಠಿಗಳು ಪರಸ್ಪರ ಹರ್ಷಭರಿತವಾಗಿ ಮಾತುಕತೆ ನಡೆಸಿ ಸ್ನೇಹಮಿಲನಕ್ಕೆ ಸಾಕ್ಷಿಯಾದರು.ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಲವ, ಪ್ರಕಾಶ್, ಶಿವೇಗೌಡ, ರಮೇಶ್ ನಾಯಕ್, ಚಂದ್ರಶೇಖರ್‌, ನಾಗರತ್ನ, ತನುಜಾ, ವಿನೋಧ, ಜಯಲಕ್ಷ್ಮೀ, ಭಾಗ್ಯ, ಪಾಪಣ್ಣ, ಹೊನ್ನಮ್ಮ, ವಿಜಯಲಲಕ್ಷ್ಮೀ , ನಾಗರಾಜು, ರಘು, ಮೋಹನ್ ಕುಮಾರ್‌, ಪುಟ್ಟಸ್ವಾಮಿ, ಜಗದೀಶ್, ಕೆಪಿಎಸ್ ಶಾಲೆಯ ಹಾಲಿ ಪ್ರಾಂಶುಪಾಲರಾದ ಮಂಜುನಾಥ್, ಮುಖ್ಯೋಪಾಧ್ಯಾಯರಾದ ಸತೀಶ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್, ಶಾಲೆಯ ಡಿ-ಗ್ರೂಪ್ ನೌಕರರಾಗಿದ್ದ ಈರಮ್ಮ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.