ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಸುನೀಲ ಕುಲಕರ್ಣಿ ಮಾತನಾಡಿ, ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಆಗಿ ಕಷ್ಟ ಪರಿಹರಿಸುವ ಸರ್ವರ ಮಹಾತ್ಮರಾಗಿದ್ದಾರೆ.
ಯಲಬುರ್ಗಾ: ಪಟ್ಟಣದ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಸಾರ್ವಭೌಮರ ೩೫೫ನೇ ಆರಾಧನಾ ಮಹೋತ್ಸವ ನಿಮಿತ್ತ ಭಾನುವಾರ ಶ್ರೀ ಗುರುರಾಜರ ಮಧ್ಯಾರಾಧನೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಿತು.
ಗುರುರಾಜರ ಮಧ್ಯಾರಾಧನೆ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ, ಕನಕಾಭಿಷೇಕ ಅರ್ಚನೆ, ಮಧ್ಯಾಹ್ನ ನೈವೇದ್ಯ, ಹಸ್ತೋದಕ, ಅಲಂಕಾರ, ತೀರ್ಥಪ್ರಸಾದ, ಸಂಜೆ ವೇಳೆ ಮುಧೋಳದ ಅಮೃತಲಕ್ಷ್ಮೀ ಅವರಿಂದ ಭರತನಾಟ್ಯ, ಭಜನೆ, ಪಲ್ಲಕ್ಕಿ ಸೇವಾ, ರಥೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ ಇನ್ನಿತರ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.ಆರಾಧನೆಯಲ್ಲಿ ಪಾಲ್ಗೊಳ್ಳಿ:
ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಸುನೀಲ ಕುಲಕರ್ಣಿ ಮಾತನಾಡಿ, ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಆಗಿ ಕಷ್ಟ ಪರಿಹರಿಸುವ ಸರ್ವರ ಮಹಾತ್ಮರಾಗಿದ್ದಾರೆ. ಗುರುರಾಘವೇಂದ್ರ ತೀರ್ಥರ ನಾಮಸ್ಮರಣೆಯೇ ಪರಮ ಮಂಗಳಕರವಾಗಿದೆ. ಅವರನ್ನು ಮನದಲ್ಲಿ ನೆನೆದರೆ ಸಾಕು ನಮ್ಮನ್ನು ಕಾಪಾಡುತ್ತಾನೆ. ಅವರು ಜಗತ್ತಿನ ದೊಡ್ಡ ದೈವಶಕ್ತಿಯಾಗಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾರೆ. ಗುರುರಾಯರನ್ನು ನಂಬಿದ ಭಕ್ತರಿಗೆ ಸದಾ ಒಳಿತಾಗಿದೆ. ಶ್ರೀಮಠದಲ್ಲಿ ನಡೆಯುವ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ರಾಯರ ಕೃಪೆಗೆ ಪಾತ್ರರಾಗಬೇಕು ಎಂದರು.ಆ. ೨೯ರಂದು ಶ್ರೀ ಗುರುರಾಜರ ಪೂರ್ವಾರಾಧನೆ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ನಡೆದವು. ಈ ಸಂದರ್ಭ ಪ್ರಧಾನ ಅರ್ಚಕ ಗುರುರಾಜ ಪುರೋಹಿತ, ಅರ್ಚಕ ಪವನ ಪುರೋಹಿತ, ಗೋವಿಂದಾಚಾರ್ ಪುರೋಹಿತ, ಗುರುರಾಜ ತುಮ್ಮರಗುದ್ದಿ, ಜಗನ್ನಾಥರಾವ್ ದೇಸಾಯಿ, ಶೇಷಗಿರಿರಾವ್ ಪಟವಾರಿ, ಸ್ನೇಹಾ ಸುಧೀರ ಕೊರ್ಲಹಳ್ಳಿ, ಗುರುರಾಜ ದೇಸಾಯಿ ಬಂಡಿಹಾಳ, ರಮೇಶ ದೇಶಪಾಂಡೆ, ಸಂತೋಷಿಮಾ ಜೋಶಿ, ವಸಂತ ಕುಲಕರ್ಣಿ, ಪಾಂಡುರಂಗ ದೇಸಾಯಿ, ನಾರಾಯಣ ಗಂಗಾಖೇಡ, ವೆಂಕಟೇಶ ಆಚಾರ್ ಜೋಶಿ, ರವಿಕುಮಾರ್ ತಾಳಿಕೋಟಿ, ಶ್ರೀನಿವಾಸರಾವ್ ದೇಸಾಯಿ, ರಂಜನಾ ವಿಜಯಕುಮಾರ ಗುಂಡೂರ, ಆರತಿ ಜೋಶಿ, ಸುಧನ್ವಾ ಕೊರ್ಲಹಳ್ಳಿ ಇದ್ದರು.
ಇಂದು ಗುರುರಾಜರ ಉತ್ತರಾರಾಧನೆ: ಆ. ೩೧ರಂದು ಶ್ರೀ ಗುರುರಾಜರ ಉತ್ತರಾರಾಧನೆ ಅಂಗವಾಗಿ ನಾನಾ ಧಾರ್ಮಿಕ ಕಾರ್ಯ ವಿಜೃಂಭಣೆಯಿಂದ ನಡೆಯಲಿವೆ.ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ, ರಥಾಂಗ ಹೋಮ ನಡೆಯಲಿದೆ. ೧೦ ಗಂಟೆಗೆ ರಥೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ನೈವೇದ್ಯ, ಹಸ್ತೋದಕ, ಅಲಂಕಾರ, ತೀರ್ಥಪ್ರಸಾದ, ಸಂಜೆ ೬ಕ್ಕೆ ಗಂಗಾವತಿಯ ಮಹ್ಮದ್ ರಿಜ್ವಾನ್ ಮುದ್ದಾಬಳ್ಳಿ ಹಾಗೂ ಅವರ ಶಿಷ್ಯವೃಂದದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ರಾಯರ ಆರಾಧನೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ತುಮ್ಮರಗುದ್ದಿ, ತಲ್ಲೂರು, ವಜ್ರಬಂಡಿ, ಮಲಕಸಮುದ್ರ, ಗೆದಗೇರಿ, ಬಂಡಿಹಾಳ, ಮುರಡಿ, ಮುಧೋಳ, ಕುಡಗುಂಟಿ ಸೇರಿದಂತೆ ನಾನಾ ಕಡೆಯಿಂದ ಶ್ರೀಮಠಕ್ಕೆ ಆಗಮಿಸಿದ್ದ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.ಗುರು ರಾಘವೇಂದ್ರ ತೀರ್ಥರ ೩೫೫ನೇ ಆರಾಧನಾ ಮಹೋತ್ಸವ ಅಂಗವಾಗಿ ಮಠದಲ್ಲಿ ಮೂರು ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಗಳ ಜತೆಗೆ ಭರತನಾಟ್ಯ, ಸಂಗೀತ ಕಾರ್ಯಕ್ರಮ ನಡೆಯಲಿವೆ. ಗುರುರಾಯರ ಆರಾಧನೆಯಿಂದ ಸಮಾಜಕ್ಕೆ ಒಳಿತಾಗಲಿ. ಹೆಚ್ಚಿನ ಸಂಖ್ಯೆಯ ಭಕ್ತರು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಸುನೀಲ ಕುಲಕರ್ಣಿ ತಿಳಿಸಿದ್ದಾರೆ.